ಮಂಡ್ಯ:ಸವರ್ಣೀಯರ ಗುಂಪೊಂದು ದಲಿತನೊಬ್ಬನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಇದನ್ನು ಪ್ರಶ್ನಿಸಿದ ಆತನ ತಾಯಿಯ ಮೇಲೂ ಹಲ್ಲೆ ಮಾಡಿದ ಘಟನೆ ಈಚೆಗೆ ಮಳವಳ್ಳಿ ತಾಲ್ಲೂಕಿನ ಹುಸ್ಕೂರು ಗ್ರಾಮದಲ್ಲಿ ಈಚೆಗೆ ನಡೆದಿದೆ.
`ಗ್ರಾಮದ ನಿಂಗರಾಜು ಸೇರಿದಂತೆ ಆರು ಜನ ಸವರ್ಣೀಯರ ಗುಂಪು ನನ್ನನ್ನು ಮತ್ತು ನನ್ನ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿತು' ಎಂದು ಕೆಂಪರಾಜು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
`ಯತ್ತಂಬಾಡಿಯಲ್ಲಿ ನಡೆಯುತ್ತಿದ್ದ ಕಾಳೇಶ್ವರ ಜಾತ್ರೆಗೆ ನೀನು ನಮ್ಮ ಜನಾಂಗದವರ ಜೊತೆಗೆ ಹೋಗಬೇಕೇ ಎಂದು ಅಡ್ಡಗಟ್ಟಿದ ಗುಂಪು ಜಗಳ ತೆಗೆದು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿತು. ಇದನ್ನು ಪ್ರಶ್ನಿಸಲು ಬಂದ ನನ್ನ ತಾಯಿಯನ್ನೂ ನಿಂದಿಸಿದರು. ಅಷ್ಟೇ ಅಲ್ಲದೇ, ಆಕೆಯ ರವಿಕೆಯನ್ನು ಹರಿದು ಅವಮಾನಿಸಿದರು. ಜಾತಿ ನಿಂದನೆ ಮಾಡಿದರು' ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಮಾರ್ಚ್ 28ರಂದು ಈ ಘಟನೆ ನಡೆದಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಏ.3ರಂದು ಪ್ರಕರಣ ದಾಖಲಾಗಿದೆ.