ಮುಂಡರಗಿ: ದಲಿತ ಮತ್ತು ಸವರ್ಣೀಯರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಉಂಟಾಗಿದ್ದ ರಾಮೇನಹಳ್ಳಿ ಗ್ರಾಮದ ದಲಿತರ ಎರಡು ಗುಡಿಸಲುಗಳಿಗೆ ದುಷ್ಕರ್ಮಿಗಳು ಮಂಗಳವಾರ ಬೆಳಗಿನ ಜಾವ ಬೆಂಕಿ ಹಚ್ಚಿದ್ದಾರೆ. ಬೆಂಕಿ ಅನಾಹುತದಲ್ಲಿ ಗುಡಿಸಲಿನಲ್ಲಿದ್ದ ಒಂದು ಸೈಕಲ್, ಪಾತ್ರೆಗಳು ಹಾಗೂ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ.
ಸವರ್ಣೀಯರಿಂದ ತಮಗೆ ಅನ್ಯಾಯವಾಗಿದೆ ಎಂದು ಕಳೆದ ಭಾನುವಾರ ರಾಮೇನಹಳ್ಳಿ ಗ್ರಾಮದ ದಲಿತ ಯುವಕನೊಬ್ಬ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದನು. ದಲಿತರು ನೀಡಿದ್ದ ದೂರಿನನ್ವಯ ಡಿವೈಎಸ್ಪಿ ಮಸೂತಿ, ಸಿಪಿಐ ಎಸ್.ಆರ್. ಪಾಟೀಲ ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಗ್ರಾಮಸ್ಥರೆಲ್ಲ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದರು.
ಗ್ರಾಮದ ಎರಡು ವರ್ಗಗಳ ನಡುವಿನ ಗಲಾಟೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದದ್ದರಿಂದ ಮುಂಜಾಗೃತಾ ಕ್ರಮವಾಗಿ ಪೊಲೀಸರು ಮೊಕಾಂ ಹೂಡಿದ್ದರು. ಪೊಲೀಸರು ಗ್ರಾಮದಲ್ಲಿ ಸ್ಥಳದಲ್ಲಿ ಇರುವಾಗಲೇ ದುಷ್ಕರ್ಮಿಗಳು ದಲಿತರ ಎರಡು ಗುಡಿಸಲುಗಳಿಗೆ ಬೆಂಕಿ ಹಚ್ಚಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಶಾಂತಿ ಸಭೆ: ಈ ಘಟನೆಯ ನಂತರ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಎರಡು ಗುಂಪುಗಳ ಮಧ್ಯೆ ಶಾಂತಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ರವಿಕುಮಾರ ನಾಯಕ `ಸಣ್ಣ ಪುಟ್ಟ ವಿಷಯಗಳಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಎಲ್ಲರಲಿಲ್ಲಿಯೂ ಮನಸ್ತಾಪವಿರುತ್ತದೆ. ಅವೆಲ್ಲವುಗಳನ್ನು ಬದಿಗೊತ್ತಿ ಎಲ್ಲರೂ ಸಹೋದರರಂತೆ ಬದುಕಬೇಕು. ಗ್ರಾಮಸ್ಥರು ನೀಡಿದ ದೂರಿನನ್ವಯ ಕೆಲವು ಜನರ ಮೇಲೆ ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಮುಂದೆ ಇಂತಹ ಘಟನೆಗಳು ನಡೆಯದಂತೆ ಗ್ರಾಮಸ್ಥರು ಮುಂಜಾಗೃತೆ ವಹಿಸಬೇಕು~ ಎಂದು ಮನವಿ ಮಾಡಿದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ, ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕ ಹೇಮಗಿರೀಶ ಹಾವಿನಾಳ ಇತರರು ಮಾತನಾಡಿದರು.
ಡಿವೈಎಸ್ಪಿ ಮಸೂತಿ, ಪುರಸಭೆ ಹಿರಿಯ ಸದಸ್ಯ ರಾಮಕೃಷ್ಣ ದೊಡ್ಡಮನಿ, ಡಿಎಸ್ಎಸ್ ಜಿಲ್ಲಾ ಮುಖಂಡ ಎಸ್.ಎ.ಬಳ್ಳಾರಿ, ಡಿ.ಜಿ.ಪೂಜಾರ ಮೊದಲಾದವರು ಮಾತನಾಡಿದರು. ಪುರಸಭೆ ಅಧ್ಯಕ್ಷೆ ರಿಹಾನಾಬೇಗಂ ಕೆಲೂರ, ಉಪಾಧ್ಯಕ್ಷ ಶಿವನಗೌಡ್ರ ಗೌಡ್ರ, ಬಿಜೆಪಿ ಅಧ್ಯಕ್ಷ ಕೆ.ವಿ.ಹಂಚಿನಾಳ, ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ, ರಾಮು ಕಲಾಲ, ಎ.ಆರ್.ಕಟ್ಟಿಮನಿ, ದೇವಪ್ಪ ಕಂಬಳಿ, ಎಂ.ಡಿ.ಮಕಾಂದಾರ, ಅಂದಾನಗೌಡ ಪಾಟೀಲ, ಸಿಪಿಐ ಎಸ್.ಆರ್.ಪಾಟೀಲ ಮೊದಲಾದವರು ಸಭೆಯಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.