ಬಸವಾಪಟ್ಟಣ: ಹಲವಾರು ದಶಕಗಳಿಂದ ಸಾಗುವಳಿ ಆಗುತ್ತಿರುವ ಜಮೀನಿನಿಂದ ಬಡ ದಲಿತರನ್ನು ಸರ್ಕಾರ ಒಕ್ಕಲೆಬ್ಬಿಸಿದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ರಾಜ್ಯ ರೈತ ಮುಖಂಡ ತೇಜಸ್ವಿ ಪಟೇಲ್ ಎಚ್ಚರಿಸಿದರು.
ಅವರು ಸಮೀಪದ ಬೆಳಲಗೆರೆ ಗೋಮಾಳದಲ್ಲಿ ಶುಕ್ರವಾರ ರೈತರನ್ನು ಉದ್ದೇಶಿಸಿ ಮಾತನಾಡಿದರು.
ಏಳೆಂಟು ದಶಕಗಳಿಂದ ಈ ಭಾಗದ 106 ದಲಿತ ಕುಟುಂಬಗಳು ಸಾಗುವಳಿ ಮಾಡುತ್ತಿದ್ದ ಬೆಳಲಗೆರೆ ಗೋಮಾಳದ 219 ಎಕರೆ ಭೂಮಿಯನ್ನು ಸರ್ಕಾರ ಈಗ ಕೃಷಿ ಇಲಾಖೆಗೆ ನೀಡಲು ಹೊರಟಿದೆ. ಇಲ್ಲಿಗೆ ಸಮೀಪದ ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರ ವತಿಯಿಂದ ಈ ಬಡ ರೈತರ ಭೂಮಿಯಲ್ಲಿ ಕೃಷಿ ಶಾಲೆಯನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದ್ದು, ದಲಿತ ರೈತರ ಹಿತದೃಷ್ಟಿಯಿಂದ ಈಯೋಜನೆಯನ್ನು ಕೈಬಿಟ್ಟು, ಇವರ ಸುಲಲಿತ ಬದುಕಿಗೆ ದಾರಿ ಮಾಡಿಕೊಡಬೇಕು. ಒಂದು ವೇಳೆ ಬಲವಂತವಾಗಿ ಈ ಜಮೀನಿಂದ ರೈತರನ್ನು ಹೊರದೂಡಿದರೆ ಉಗ್ರ ಹೋರಾಟ ಖಂಡಿತ ಎಂದು ಅವರು ನುಡಿದರು.
ತಾಲ್ಲೂಕು ಪಂಚಾಯ್ತಿ ಸದಸ್ಯ ಶಂಕರ ಪಾಟೀಲ್ ಮಾತನಾಡಿ, ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರಕ್ಕೆ ಈಗಾಗಲೇ 240 ಎಕರೆ ಭೂಮಿಯನ್ನು ಸರ್ಕಾರದಿಂದ ನೀಡಲಾಗಿದ್ದು, ಅದರಲ್ಲಿ ಸರ್ಕಾರ ಕೃಷಿ ಶಾಲೆಯನ್ನು ನಿರ್ಮಿಸುವುದನ್ನು ಬಿಟ್ಟು, ಬಡ ದಲಿತರ ಭೂಮಿ ಕಸಿದರೆ ಅವರ ಅನ್ನವನ್ನೇ ಕಸಿದಂತೆ. ದಲಿತರ ಜೀವಾಧಾರವಾಗಿರುವ ಈ ಜಮೀನನ್ನು ಅವರಿಗೆ ಬಿಡುವ ಕಾರ್ಯಕೈಗೊಳ್ಳಬೇಕೆಂದು ನುಡಿದರು.
ಸಭೆಯನ್ನು ಉದ್ದೇಶಿಸಿ ತಿಪ್ಪೇಶ ನಾಯ್ಕ, ನಿರ್ಮಲಾ ದೊಡ್ಡಪ್ಪ, ಶಿವಣ್ಣ ಮುಂತಾದವರು ಮಾತನಾಡಿದರು. ಬೆಳಗೆರೆ, ಕವಳಿತಾಂಡಾ, ಕುರುಬರಹಳ್ಳಿಯ ನೂರಾರು ರೈತರು ಭಾಗವಹಿಸಿದ್ದರು.