ಬಳ್ಳಾರಿ: ಭೂರಹಿತ ದಲಿತರಿಗೆ ಜಮೀನು ಒದಗಿಸಲು ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ದಲಿತ ಅಭಿವೃದ್ಧಿ ಸಂಘ ಒತ್ತಾಯಿಸಿದೆ.
ಸಂಘದ ಅಧ್ಯಕ್ಷ ಬಿ.ರಾಮುಡು ಮತ್ತಿತರರು ಈ ಕುರಿತ ಮನವಿಯನ್ನು ಮುಖ್ಯಮಂತ್ರಿಯವರಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಲ್ಲಿಸುವ ಮೂಲಕ ಗ್ರಾಮೀಣ ಭಾಗದ ದಲಿತರು ಸರ್ಕಾರದ ಸೌಲಭ್ಯಗಳು ದೊರೆಯದೆ ಈಗಲೂ ಆರ್ಥಿಕ ಸಮಸ್ಯೆಯಿಂದ ತೊಳಲಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ದಲಿತರಿಗೆ ಕೃಷಿ ಭೂಮಿ ನೀಡಿ ಆರ್ಥಿಕ ಸಂಕಷ್ಟದಿಂದ ಪಾರುಮಾಡಲು ಯೋಜನೆ ರೂಪಿಸಿದರೂ ಅದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಕೋರಿದ್ದಾರೆ.
ಸರ್ಕಾರ ನೀಡುತ್ತಿರುವ ಅನುದಾನ ಸಾಲದೆ ದಲಿತರು ಬೇರೆಯವರ ಹೊಲ- ಗದ್ದೆಗಳಲ್ಲಿ ಕೃಷಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವಂ ತಾಗಿದೆ. ದಲಿತರಿಗೆ ಸಮರ್ಪಕ ಭೂಮಿ ಹಂಚಿಕೆ ಮಾಡಿದಲ್ಲಿ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ದಲಿತ ಸಂಘಟನೆಗಳು ಹಲವಾರು ವರ್ಷ ಗಳಿಂದ ಹೋರಾಟ ನಡೆಸಿದರೂ ಯಾವುದೇ ರೀತಿಯ ಪ್ರಯೋಜನ ವಾಗಿಲ್ಲ ಎಂದು ಆರೋಪಿಸಲಾಗಿದೆ.
ಸರ್ಕಾರ ದಲಿತರಿಗೆ ಭೂಮಿ ನೀಡುವ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಭೂರಹಿತರು ತೀವ್ರ ಸಮಸ್ಯೆ ಯನ್ನು ಎದುರಿಸುವಂತಾಗಿದೆ. ಸರ್ಕಾರ ನಿಗದಿಪಡಿಸಿದ ಹಣದಲ್ಲಿ ಭೂಮಿಯನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಭೂ ಹಂಚಿಕೆ ಮೂಲೆ ಗುಂಪಾಗಿದೆ ಎಂದು ತಿಳಿಸಲಾಗಿದೆ.
ಗ್ರಾಮೀಣ ಭಾಗದಲ್ಲಿ ಸರ್ಕಾರಿ ಜಮೀನನ್ನು ವಶಪಡಿಸಿಕೊಂಡಿರುವ ವ್ಯಕ್ತಿಗಳಿಂದ ಜಮೀನು ಬಿಡಿಸಿ, ಅದನ್ನು ದಲಿತರಿಗೆ ಹಂಚಿಕೆ ಮಾಡಬೇಕು. ಹಳ್ಳಿ ಗಳಲ್ಲಿನ ದೇವಸ್ಥಾನಗಳಿಗೆ ನೀಡಿರುವ ಹೆಚ್ಚಿನ ಪ್ರಮಾಣದ ಭೂಮಿಯನ್ನು ವಶಪಡಿಸಿಕೊಳ್ಳುವ ಕೆಲಸವಾಗಬೇಕು ಎಂದು ರವಿ, ಗೋಪಾಲ, ವೆಂಕಟ ಸ್ವಾಮಿ, ಭರತ್ಕುಮಾರ್, ರಾಮು, ರಾಜು, ನಾಗರಾಜ, ಕೊಂಡಯ್ಯ, ರಾಖೇಶ್, ರಂಗ, ರಾಜು, ಗೋಪಿ, ರಾಮಚಂದ್ರ, ಕೃಷ್ಣ ಯಾದವ್, ಎಸ್. ಲಕ್ಷ್ಮಣ ಮತ್ತಿತರರು ಒತ್ತಾಯಿಸಿದ್ದಾರೆ.