ಬೆಂಗಳೂರು: `ರಾಜಕೀಯ ಹಿತಾಸಕ್ತಿ ಗಳಿಗಾಗಿ ದಲಿತ ಜನಾಂಗವನ್ನು ಬಳಸಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಎಚ್ಚರವಹಿಸಬೇಕು' ಎಂದು ದಲಿತ ಸೇನೆಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸೂರ್ಯಮಣಿ ಬಿಗ್ಹಾಡೆ ಅಭಿಪ್ರಾಯಪಟ್ಟರು.
ದಲಿತ ಸೇನೆಯು ಕೆ.ಇ.ಬಿ. ಎಂಜಿನಿಯರಿಂಗ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಚಿಂತನ- ಮಂಥನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಅವಕಾಶ ರಾಜಕಾರಣದ ಸಂದರ್ಭಗಳು ಹೆಚ್ಚುತ್ತಿದೆ. ಅವಕಾಶವಿದ್ದೆಡೆ ದಲಿತ ಶಕ್ತಿಯನ್ನು ಬಳಸಿಕೊಂಡು ರಾಜಕೀಯವಾಗಿ ಸಬಲರಾಗುವ ಹಲವು ನಾಯಕರು ನಂತರ ದಲಿತರನ್ನು ಕಡೆಗಣಿಸುತ್ತಾರೆ. ಇದಕ್ಕೆಲ್ಲ ಅವಕಾಶ ನೀಡದಂತೆ ದಲಿತರು ಜಾಗೃತರಾಗಬೇಕು' ಎಂದು ತಿಳಿಸಿದರು.
`ಗ್ರಾಮಗಳಲ್ಲಿ ದಲಿತಶಕ್ತಿಯನ್ನು ಸಂಘಟಿಸುವ ಸಲುವಾಗಿ ಎಲ್ಲ ಕಾರ್ಯ ಕರ್ತರು ಒಂದುಗೂಡುವ ಅಗತ್ಯ ಎದ್ದುಕಾಣುತ್ತಿದೆ. ದಲಿತರಲ್ಲಿರುವ ಒಡಕುಗಳು ಮರೆಯಾದರೆ ಏಳಿಗೆ ಸಾಧ್ಯವಿದೆ' ಎಂದು ತಿಳಿಸಿದರು.
ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಎಂ.ಎಸ್. ಜಗನ್ನಾಥ್ ಮಾತನಾಡಿ, `ಅಂಬೇಡ್ಕರ್ ಅವರಂತಹ ಮೇರು ವ್ಯಕ್ತಿತ್ವದ ನಾಯಕ ಕೇವಲ ಪ್ರತಿಮೆಗಳಲ್ಲಿ, ಭಾವಚಿತ್ರಗಳಲ್ಲಿ ರೂಪ ಪಡೆಯದೇ ದಲಿತರ ನಿಜವಾದ ಶಕ್ತಿಯಾಗಬೇಕು' ಎಂದು ಹೇಳಿದರು.
ಗೌರವಾಧ್ಯಕ್ಷ ವೆಂಕಟರಮಣ ಸ್ವಾಮಿ ಮಾತನಾಡಿ, `ಹೊಸ ಪೀಳಿಗೆ ಯುವಕರು ದಲಿತ ಹಾಗೂ ಬಂಡಾಯ ಚಳವಳಿಯ ಪೂರ್ವಾಪರವನ್ನು ಸಮರ್ಪಕವಾಗಿ ತಿಳಿದುಕೊಂಡು ಆ ನಂತರ ದಲಿತರ ಸಮಸ್ಯೆಗಳಿಗೆ ಸೂಕ್ಷ್ಮವಾಗಿ ಸ್ಪಂದಿಸಲಿ' ಎಂದು ಆಶಯ ವ್ಯಕ್ತಪಡಿಸಿದರು.