ಬೆಂಗಳೂರು: ಮಾಜಿ ಸಚಿವ ಬಿ.ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಬಿಜೆಪಿಯ ಆಂತರಿಕ ವಿಷಯ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
`ಬಿಜೆಪಿಯ ಆಂತರಿಕ ಸಂಘರ್ಷ ಈಗ ಬೀದಿಗೆ ಬಂದಿದೆ. ಈ ಸರ್ಕಾರ ಬಂದ ದಿನದಿಂದಲೂ ಶಾಸಕರು ಮತ್ತು ಸರ್ಕಾರದ ನಡುವೆ ವಿಶ್ವಾಸದ ಕೊರತೆ ಇದೆ. ಈಗ ಅದು ಸ್ಫೋಟಗೊಂಡಿದೆ~ ಎಂದರು.
`ಹಿಂದೆ ಪ್ರವಾಹ ಬಂದಾಗಲೂ ಬಿಜೆಪಿಯಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಿಸಿದ್ದ ಪರಿಣಾಮವಾಗಿ ಸರ್ಕಾರ ಜನರ ನೆರವಿಗೆ ಧಾವಿಸಿರಲಿಲ್ಲ. ಈಗಲೂ ಅತಿವೃಷ್ಟಿಯಿಂದ ಜನರು ಸಮಸ್ಯೆಯಲ್ಲಿದ್ದಾರೆ. ಬಿಜೆಪಿಯಲ್ಲಿ ಮತ್ತೆ ಬಿಕ್ಕಟ್ಟು ಉದ್ಭವಿಸುವ ಲಕ್ಷಣ ಕಾಣಿಸುತ್ತಿದೆ. ಬಿಜೆಪಿ ಮುಖಂಡರು ವಿಧಾನಸಭೆಯನ್ನು ವಿಸರ್ಜಿಸಿ ಮತ್ತೆ ಜನಾದೇಶ ಪಡೆಯಲು ಮುಂದಾಗಲಿ~ ಎಂದು ಒತ್ತಾಯಿಸಿದರು.
`ಶ್ರೀರಾಮುಲು ಜೆಡಿಎಸ್ ಸೇರುತ್ತಾರೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಈವರೆಗೂ ಅಂತಹ ಯಾವುದೇ ಚರ್ಚೆಯೂ ನಡೆದಿಲ್ಲ~ ಎಂದರು.