ನವದೆಹಲಿ (ಪಿಟಿಐ): ಒಂದು ದಶಕದ ಹಿಂದೆ ಸರ್ಕಾರಿ ದಾಖಲೆಗಳನ್ನು ಕಳವು ಮಾಡಿದ ಪ್ರಕರಣ ಕುರಿತಂತೆ ಹೋಟೆಲ್ ಉದ್ದಿಮೆಯೊಂದರ ಮುಖ್ಯಸ್ಥ ಮತ್ತು ಈ ಉದ್ದಿಮೆಯ ಲೆಕ್ಕ ಪರಿಶೋಧಕ (ಚಾರ್ಟೆಡ್ ಅಂಕೌಟೆಂಟ್) ಸಂಸ್ಥೆ ಮುಖ್ಯಸ್ಥರಿಗೆ ಕೋರ್ಟ್ಗೆ ಹಾಜರಾಗುವಂತೆ ದೆಹಲಿ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಕೆಲವು ದಾಖಲೆಗಳು ನಾಪತ್ತೆಯಾಗಿದ್ದವು. ಇವು ಒಂದು ದಶಕದ ಹಿಂದೆ (ನವೆಂಬರ್, 2001) `ಧಿಂಗ್ರಾ ಹಣಕಾಸು ನಿಯಂತ್ರಕರು ಮತ್ತು ಚಾರ್ಟೆಡ್ ಅಂಕೌಟೆಂಟ್~ ಸಂಸ್ಥೆ ಮುಖ್ಯಸ್ಥ ಪ್ರದೀಪ್ ಕುಮಾರ್ ಧಿಂಗ್ರಾ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಸಂದರ್ಭದಲ್ಲಿ ಪತ್ತೆಯಾದವು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಸುನೈರ್ ಹೋಟೆಲ್ ಲಿಮಿಟೆಡ್ ಮುಖ್ಯಸ್ಥ ಸತ್ಯಪಾಲ್ ಗುಪ್ತಾ ಮತ್ತು ಈ ಹೋಟೆಲ್ನ ಲೆಕ್ಕಪತ್ರಗಳನ್ನು ಪರಿಶೋಧಿಸುತ್ತಿದ್ದ ಪ್ರದೀಪ್ ಕುಮಾರ್ ಧಿಂಗ್ರಾ ಅವರಿಗೆ ಈ ಸಮನ್ಸ್ ಜಾರಿ ಮಾಡಲಾಗಿದೆ.
ಗುಪ್ತಾ ಮತ್ತು ಧಿಂಗ್ರಾ ವಿರುದ್ಧ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗವು ಸರ್ಕಾರಿ ದಾಖಲೆ ಕಳವು ಮತ್ತು ಕಳವು ಮಾಡಿದ ಸ್ವತ್ತು ಹೊಂದಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಪಟ್ಟಿ ಸಲ್ಲಿಸಿತ್ತು.
ಈ ಪ್ರಕರಣ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿಗಳಿಗೆ ಐಪಿಸಿ 380 (ಕಳವು), 411(ಕಳವು ಮಾಡಿದ ಸ್ವತ್ತು ಹೊಂದಿವುದು) ಮತ್ತು 120-ಬಿ (ಕ್ರಿಮಿನಲ್ ಸಂಚು) ಕಲಂಗಳಡಿಯಲ್ಲಿ ಸಮಾನ್ ಜಾರಿ ಮಾಡಿ ನವೆಂಬರ್ 16ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.
ಗುಪ್ತಾ ಮತ್ತು ಧಿಂಗ್ರಾ ವಿರುದ್ಧ ದೆಹಲಿಯ ವಿಎಲ್ಎಸ್ ಫೈನಾನ್ಸ್ ಲಿಮಿಟೆಡ್ನ ನೌಕರ ಹರ್ಷ್ ಅಲ್ಗಾ ಅಕ್ಟೋಬರ್ 24, 2005ರಲ್ಲಿ ದೂರು ನೀಡಿದ್ದರು.
ಹಾಗೆಯೇ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಕೂಡ ನವೆಂಬರ್- 2001ರಲ್ಲಿ ಆದಾಯ ತೆರಿಗೆ ಇಲಾಖೆ ಪ್ರದೀಪ್ ಕುಮಾರ್ ಧಿಂಗ್ರಾ ಅವರ ಮನೆಯ ಮೇಲೆ ದಾಳಿ ನಡೆಸಿ ವಶ ಪಡಿಸಿಕೊಂಡ ದಾಖಲೆಗಳು ತಮ್ಮ ಸಚಿವಾಲಯದ ಅಧೀನದಲ್ಲಿರುವ ಕಂಪೆನಿ ವ್ಯವಹಾರಗಳ ಇಲಾಖೆಯಿಂದ ನಾಪತ್ತೆಯಾದ ಕಡತಗಳೆಂದು 2002ರಲ್ಲಿ ಪೊಲೀಸರಿಗೆ ದೂರು ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.