ಮೈಸೂರು: ನೀರ್ ದೋಸೆ, ಕುಕುಂಬರ್ ಉತ್ತಪ್ಪ..ಬಂಗಾರಪೇಟೆ, ಚಿಕನ್, ಮಟನ್, ದಂ ಬಿರಿಯಾನಿ!..ಹೆಸರು ಕೇಳುತ್ತಿದ್ದಂತೆಯೇ ಬಾಯಲ್ಲಿ ನೀರೂರಿದರೂ ಅ.16ರ ವರೆಗೆ ಕಾಯಬೇಕು.
ದಸರಾ ಉತ್ಸವದ ಅಂಗವಾಗಿ ಅ. 16 ರಿಂದ 22ರ ವರೆಗೆ `ಕಾಡಾ~ ಕಚೇರಿ ಆವರಣದಲ್ಲಿ ನಡೆಯಲಿರುವ `ಆಹಾರ ಮೇಳ~ದಲ್ಲಿ ಬಗೆ ಬಗೆಯ ಖಾದ್ಯಗಳು ಆಹಾರ ಪ್ರಿಯರ ರುಚಿ ತಣಿಸಲಿವೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಹಾರ ಮೇಳ ಉಪ ಸಮಿತಿ ಅಧ್ಯಕ್ಷ ಎಂ. ರಾಜೇಂದ್ರ, `ಏಳು ದಿನಗಳ ಕಾಲ ನಡೆಯಲಿರುವ ಆಹಾರ ಮೇಳದಲ್ಲಿ 55 ರಿಂದ 60 ಮಳಿಗೆಗಳು ಇರುತ್ತವೆ. ಸ್ಥಳೀಯ ತಿಂಡಿ, ತಿನಿಸುಗಳ ಜತೆಗೆ ಕರಾವಳಿ, ಮಲೆನಾಡು, ದಕ್ಷಿಣ ಮತ್ತು ಉತ್ತರ ಕರ್ನಾಟಕದ ವಿಶೇಷ ತಿಂಡಿ ಸೇರಿದಂತೆ ಅನೇಕ ಖಾದ್ಯಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ~ ಎಂದರು.
`ಗಂಡ-ಹೆಂಡತಿಗೆ ಅಡುಗೆ ಮಾಡುವ ಸ್ಪರ್ಧೆ, ಅಜ್ಜಿಯರಿಗೆ ಹಳೆ ಕಾಲದ ತಿಂಡಿ, ತಿನಿಸುಗಳನ್ನು ಸಿದ್ಧಪಡಿಸುವ ಸ್ಪರ್ಧೆ, ಮಕ್ಕಳಿಗಾಗಿ ತರಕಾರಿ ವೇಷಭೂಷಣ, 8 ರಿಂದ 16 ವರ್ಷದವರಿಗೆ ಇಡ್ಲಿ ತಿನ್ನುವ ಸ್ಪರ್ಧೆ, 17 ರಿಂದ 30 ವರ್ಷದವರಿಗೆ ತುಪ್ಪದ ದೋಸೆ ತಿನ್ನುವ ಸ್ಪರ್ಧೆ ಹಾಗೂ 31 ರಿಂದ 50 ವರ್ಷದವರಿಗೆ ಏಲಕ್ಕಿ ಬಾಳೆ ಹಣ್ಣು ತಿನ್ನುವ ಸ್ಪರ್ಧೆ ಆಯೋಜಿಸಲಾಗಿದೆ~ ಎಂದು ಹೇಳಿದರು.
`ಆಹಾರ ಮೇಳದಲ್ಲಿ ಮಳಿಗೆ ತೆರೆಯಲು 300 ಅರ್ಜಿಗಳು ಬಂದಿವೆ. 55 ಮಳಿಗೆಗಳಿಗೆ ಅವಕಾಶ ನೀಡಲಾಗುವುದು. ತಿಂಡಿಗಳ ದರವನ್ನು ಉಪ ಸಮಿತಿ ವತಿಯಿಂದಲೇ ನಿರ್ಧರಿಸಿ, ದರ ಪಟ್ಟಿಯನ್ನು ಮಳಿಗೆ ಮುಂಭಾಗದಲ್ಲಿ ಅಳವಡಿಸುವಂತೆ ಸೂಚಿಸಲಾಗುವುದು. ಪ್ರತಿ ಮಳಿಗೆಗೆ ರೂ 7 ಸಾವಿರ ಬಾಡಿಗೆ ನಿಗದಿಪಡಿಸಲಾಗಿದೆ~ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ: `ಪ್ರತಿ ನಿತ್ಯ ಸಂಜೆ 6 ರಿಂದ ರಾತ್ರಿ 9ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. 16 ರಂದು ಬೆಂಗಾಲಿ ಸಾಂಸ್ಕೃತಿಕ ಸಂಜೆ, 17 ರಂದು ಮೈಸೂರಿನ ನಾಟ್ಯಾಸ್ ಅಕಾಡೆಮಿ ಸಾಂಸ್ಕೃತಿಕ ಸಂಜೆ, 18 ರಂದು ಕೃಪಾ ಫಡ್ಕೆ ಮತ್ತು ತಂಡ, 19 ರಂದು ಭೂಷಣ್ ಅಕಾಡೆಮಿ, 20 ರಂದು ಕೇರಳ ಸಮಾಜ, 21 ರಂದು ಉಡುಪಿಯ ಭಾರ್ಗವಿ ಮತ್ತು ತಂಡ ಹಾಗೂ 22 ರಂದು ಕಲಾಸೌರಭ ತಂಡದಿಂದ ಕಾರ್ಯಕ್ರಮ ನಡೆಯಲಿವೆ~ ಎಂದರು.
ಸ್ಪರ್ಧೆಗಳಲ್ಲಿ ಭಾಗವಹಿಸಲು ಮೊ. 99005-23347, 94487-50794 ಸಂಪರ್ಕಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.