ಗೋಣಿಕೊಪ್ಪಲು: ಕಾವೇರಿ ದಸರಾ ಸಮಿತಿಯಿಂದ ಆಚರಿಸಲ್ಪಡುತ್ತಿರುವ ದಸರಾ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ಬಾರಿ ಡಿಜೆ ಮ್ಯೂಸಿಕ್ ಅನ್ನು ನಿಷೇಧಿಸಲಾಗಿದೆ ಎಂದು ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಗಿರೀಶ್ ಗಣಪತಿ ಹೇಳಿದರು.
28ರಂದು ಬೆಳಿಗ್ಗೆ 7 ಗಂಟೆಗೆ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ ಮಾಡಲಾಗುವುದು. ನವರಾತ್ರಿ ಉತ್ಸವ ಮುಗಿಯುವವರೆಗೆ ಪ್ರತಿದಿನ ಸಂಜೆ 6 ರಿಂದ 7.30ರ ವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಬಳಿಕ 7.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಆನಂತರ ನಾಡಿನ ಪ್ರಖ್ಯಾತ ಕಲಾವಿದರಿಂದ ಸಂಗೀತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಅ. 6ರಂದು ದಸರಾ ನಾಡ ಹಬ್ಬ ಸಮಿತಿ ವತಿಯಿಂದ ಆಕರ್ಷಕ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ. ವಿವಿಧ ದಿನಗಳಲ್ಲಿ ಕ್ರೀಡಾ ಕೂಟವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಸ್ಥಳೀಯ ಕಾವೇರಿ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಎಂಇಜಿ ಸಾಯಿ, ಟ್ರೆಟನ್ ಬೆಂಗಳೂರು ಹಾಗೂ ಸ್ಥಳೀಯ ತಂಡಗಳು ಪಾಲ್ಗೊಳ್ಳಲಿವೆ. ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ರೂ. 20 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದರು.
ದ್ವಿತೀಯ ತಂಡಕ್ಕೆ ರೂ. 10 ಸಾವಿರ, ತೃತೀಯ ತಂಡಕ್ಕೆ ರೂ. 5 ಸಾವಿರ ಬಹುಮಾನ ನೀಡಲಾಗುವುದು. ಸೆ. 30 ರಿಂದ ಅ. 2ರ ವರೆಗೆ ಪಂದ್ಯಾಟ ನಡೆಯಲಿದೆ. ಅ. 3ರಂದು ಮಧಾಹ್ನ 2 ಗಂಟಗೆ ಅಂತಿಮ ಪಂದ್ಯಾವಳಿ ಜರುಗಲಿದೆ. ಟೂರ್ನಿಗೆ ಅತಿಥಿಗಳಾಗಿ ರಾಷ್ಟ್ರೀಯ ತಂಡದ ಕೊಡಗಿನ ಆಟಗಾರರಾದ ಸುನಿಲ್ ಹಾಗೂ ರಘುನಾಥ್ ಅವರನ್ನು ಆಹ್ವಾನಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಕೋಶಾಧಿಕಾರಿ ಪ್ರಭು, ಕಾರ್ಯದರ್ಶಿ ಲೋಕೇಶ್, ಗಾಂಧಿ, ರಾಮಕೃಷ್ಣ, ಗ್ರಾ.ಪಂ. ಸದಸ್ಯೆ ರೀನಾ ಹಾಜರಿದ್ದರು.