‘ದಸರಾ ಕವಿ ಸಮ್ಮೇಳನವನ್ನು ಯುವ, ಮಹಿಳಾ ಹಾಗೂ ಪ್ರಧಾನ ಕವಿಗೋಷ್ಠಿ ಎಂದು ವಿಂಗಡಿಸಲಾಗಿದೆ. ಕಳೆದ ಬಾರಿ ಮಕ್ಕಳಿಗೆ ಅವಕಾಶ ಕಲ್ಪಿಸಿದ್ದ ಚಿಗುರು ಕವಿಗೋಷ್ಠಿಯ ಬದಲಾಗಿ ಯುವ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಯುವ ಸಾಹಿತಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಕವಿಯತ್ರಿಯರಿಗಾಗಿ ಮಹಿಳಾ ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು, ಆಯ್ಕೆಗೆ ಒಂದು ಕವನ ಸಂಕಲನದ ಪ್ರಕಟಣೆಯನ್ನು ಮಾನದಂಡವಾಗಿ ಪರಿಗಣಿಸಲಾಗಿದೆ. ಈ ಎರಡೂ ಕವಿಗೋಷ್ಠಿಯಲ್ಲಿ ಕವನ ವಾಚಿಸುವವರಿಗೆ ರೂ 500 ಗೌರವಧನ ಹಾಗೂ ಭತ್ಯೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ ಅವರು ಅ. 10ರಂದು ಬೆಳಿಗ್ಗೆ 10.30ಕ್ಕೆ ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಚಾಲನೆ ನೀಡಲಿದ್ದಾರೆ. ಅಂತರರಾಷ್ಟ್ರೀಯ ಕಲಾವಿದ ಕೆ.ಟಿ. ಶಿವಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಮಹಿಳಾ ಕವಿಗೋಷ್ಠಿ ಜರುಗಲಿದ್ದು, ಕವಯತ್ರಿ ಡಾ.ಮಲ್ಲಿಕಾ ಘಂಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರೊ.ಕಾಳೇಗೌಡ ನಾಗವಾರ ಭಾಗವಹಿಸಲಿದ್ದು, ವೀಣಾ ಬನ್ನಂಜೆ, ಕೆ. ನೀಲಾ ಸೇರಿದಂತೆ 25 ಕವಯತ್ರಿಯರು ಭಾಗವಹಿಸಲಿದ್ದಾರೆ. ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ಪತ್ನಿ ಡಾ.ಗೀತಾ ಮಹದೇಪ್ರಸಾದ್ ಅವರಿಗೂ ಅವಕಾಶ ನೀಡಲಾಗಿದೆ.