ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ದರ್ಶನಕ್ಕೆ 200 ಬಸ್ಸುಗಳು

Last Updated 13 ಅಕ್ಟೋಬರ್ 2012, 5:45 IST
ಅಕ್ಷರ ಗಾತ್ರ

ಮೈಸೂರು: ದಸರಾ ದರ್ಶನ ಉಪ ಸಮಿತಿಯು ಅ.17 ರಿಂದ 22 ರ ವರೆಗೆ ದಸರಾ ದರ್ಶನ ಕಾರ್ಯಕ್ರಮವನ್ನು ಆಯೋಜಿಸಿದ್ದು, ಒಟ್ಟು 10,500 ಮಂದಿ ದಸರಾ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.

ಅ.17 ರಿಂದ 19 ತನಕ ಮೈಸೂರು, ಹಾಸನ ಜಿಲ್ಲೆಗಳ 15 ತಾಲ್ಲೂಕುಗಳಿಂದ, ಅ.20 ರಿಂದ 22ರ ವರೆಗೆ ಮಂಡ್ಯ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳ 14 ತಾಲ್ಲೂಕುಗಳಿಂದ ದಸರಾ ನೋಡಿರದ ಮಹಿಳೆಯರು, ವೃದ್ಧರು, ಆರ್ಥಿಕವಾಗಿ ಹಿಂದುಳಿದವರನ್ನು ಕರೆತರಲಾಗು ವುದು ಎಂದು ಉಪ ಸಮಿತಿ ವಿಶೇಷಾಧಿಕಾರಿ ಹಾಗೂ ಕೆಎಸ್‌ಆರ್‌ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎನ್.ಶ್ರೀನಿವಾಸ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಬಾರಿ ದಸರಾ ದರ್ಶನಕ್ಕಾಗಿ 29 ತಾಲ್ಲೂಕುಗಳಿಂದ ಒಟ್ಟು 200 ಬಸ್ಸುಗಳನ್ನು ಬಿಡಲಾಗುವುದು. ದಸರಾ ದರ್ಶನಕ್ಕೆ ಆಗಮಿಸು ವವರಿಗೆ ಚಾಮುಂಡಿಬೆಟ್ಟ, ಮೃಗಾಲಯ, ಅರಮನೆ, ರೈತ ದಸರಾ ಹಾಗೂ ಇತರೆ ದಸರಾ ಕಾರ್ಯಕ್ರಮ ತೋರಿಸಲಾಗುವುದು. ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆಗೆ ಅವಕಾಶ ಕಲ್ಪಿಸಲಾಗುವುದು. ಮೃಗಾಲಯದಲ್ಲಿ ಕೇವಲ 15 ರೂಪಾಯಿಗೆ ಪ್ರವೇಶ ಪಡೆಯಬಹುದು. ಕೆಲವು ಹೋಟೆಲ್‌ಗಳನ್ನು ಗುರುತಿಸಿ ರಿಯಾಯ್ತಿ ದರದಲ್ಲಿ ಊಟ ನೀಡುವಂತೆ ಕೋರಲಾಗುವುದು. ಅಲ್ಲದೇ ದಸರಾ ದರ್ಶನಕ್ಕೆ ಬರುವವರ ಆರೋಗ್ಯದಲ್ಲಿ ಏರುಪೇರಾದರೆ ವೈದ್ಯಕೀಯ ಸೌಲಭ್ಯವನ್ನು ನೀಡಲಾಗುವುದು ಎಂದು ವಿವರ ನೀಡಿದರು.

ರಿಯಾಯ್ತಿ ಪ್ರವಾಸ ಪಾಸ್
ದಸರಾ ದರ್ಶನಕ್ಕೆ ಆಗಮಿಸ ಬಯಸುವ ಜನತೆ ರೂ.50 ರಿಯಾಯ್ತಿ ಪ್ರವಾಸದ ಪಾಸನ್ನು ಖರೀದಿಸಬೇಕು. ಈಗಾಗಲೇ 29 ತಾಲ್ಲೂಕುಗಳ ತಹಶೀಲ್ದಾರ್‌ಗಳಿಗೆ ಪಾಸ್‌ಗಳನ್ನು ವಿತರಿಸಲಾ ಗಿದೆ. ದಸರಾ ದರ್ಶನಕ್ಕೆ ಆಗಮಿಸುವವರ ಮಾರ್ಗದರ್ಶನ ನೀಡಲು ಕೆಎಸ್‌ಆರ್‌ಟಿಸಿ ನೌಕರರನ್ನು ನಿಯೋಜಿಸಲಾಗುವುದು ಎಂದು ಹೇಳಿದರು.

ಉಪ ಸಮಿತಿ ಅಧ್ಯಕ್ಷೆ ಸುನಂದರಾಜ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ತುಂಬಾ ಮಹಿಳೆಯರು ದಸರಾವನ್ನು ನೋಡಿಯೇ ಇಲ್ಲ. ಆದ್ದರಿಂದ ಇನ್ನೂ ಹೆಚ್ಚುವರಿಯಾಗಿ 100 ಬಸ್‌ಗಳನ್ನು ಬಿಡಬೇಕು. ಈ ಸಂಬಂಧವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಜೊತೆ ಮಾತನಾಡಿದ್ದೇನೆ ಎಂದು ಹೇಳಿದರು.
ಉಪ ಸಮಿತಿ ಉಪಾಧ್ಯಕ್ಷರಾದ ಕಿರಣ್‌ಕುಮಾರ್, ಸಿದ್ದಮಲ್ಲಪ್ಪ, ಮಲ್ಲಿಕಾರ್ಜುನಪ್ಪ, ಕಾರ್ಯದರ್ಶಿಗಳಾದ ವಸುಂದರಾದೇವಿ, ಪುಟ್ಟೇಗೌಡ ಇದ್ದರು.
 

10 ಹೆಚ್ಚುವರಿ ಮಾಹಿತಿ ಕೇಂದ್ರಗಳು
ಮೈಸೂರು: ದಸರಾ ಪ್ರವಾಸೋದ್ಯಮ ಉಪ ಸಮಿತಿಯು ಈ ಬಾರಿ ಹೆಚ್ಚುವರಿಯಾಗಿ 10 ಮಾಹಿತಿ ಕೇಂದ್ರಗಳನ್ನು ತೆರೆದು ಪ್ರವಾಸಿಗರಿಗೆ ಮಾಹಿತಿ ನೀಡಲಿದೆ ಎಂದು ಉಪ ಸಮಿತಿ ಅಧ್ಯಕ್ಷ ಡಿ.ತಿಮ್ಮಯ್ಯ ಶುಕ್ರವಾರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸ್ಸು ನಿಲ್ದಾಣ, ಕಾವೇರಿ ಆರ್ಟ್ ಅಂಡ್ ಕ್ರಾಫ್ಟ್ ಎಂಪೋರಿಯಂ ಎದುರು, ಅರಮನೆಯ ಬಲರಾಮ ಗೇಟಿನ ಬಳಿ, ಜಗನ್ಮೋಹನ ಅರಮನೆ, ನಂಜನಗೂಡು ದೇವಾಲಯದ ಬಳಿ, ತಲಕಾಡು ಶ್ರೀ ವೈದ್ಯನಾಥೇಶ್ವರ ದೇವಾಲಯದ ಬಳಿ, ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯದ ಬಳಿ, ಬೆಂಗಳೂರು-ಮೈಸೂರು ಹೆದ್ದಾರಿ ರಿಂಗ್ ರಸ್ತೆ ಬಳಿ, ಕೆ.ಆರ್. ಸರ್ಕಲ್, ಹಳೆ ವಸ್ತುಪ್ರದರ್ಶನದ ಕಟ್ಟಡದ ಸಿಗ್ನಲ್ ವೃತ್ತದ ಬಳಿ ಹೆಚ್ಚುವರಿ ಮಾಹಿತಿ ಕೇಂದ್ರಗಳು ಕೆಲಸ ನಿರ್ವಹಿಸಲಿವೆ ಎಂದರು.

ಈಗಾಗಲೇ ಸೇಂಟ್ ಫಿಲೋಮಿನಾ ಚರ್ಚ್, ಮೃಗಾಲಯ, ಚಾಮುಂಡಿಬೆಟ್ಟ, ಅರಮನೆಯ ವರಾಹ ಗೇಟ್, ಚಾಮುಂಡಿ ಬೆಟ್ಟದ ಪಾದ, ಸೋಮನಾಥಪುರ, ಎಚ್.ಡಿ.ಕೋಟೆ, ಹುಣ ಸೂರು, ತಿ.ನರಸೀಪುರದಲ್ಲಿ ಮಾಹಿತಿ ಕೇಂದ್ರಗಳು ಕೆಲಸ ಮಾಡುತ್ತಿವೆ ಎಂದು ಹೇಳಿದರು.

25 ಪಾರಂಪರಿಕ ಟಾಂಗಾಗಳು ಮತ್ತು ಸಾರೋಟುಗಳನ್ನು ದಸರಾ ಉಪ ಸಮಿತಿ ವತಿಯಿಂದ ಆಯ್ಕೆ ಮಾಡಿ ಟಾಂಗಾವಾಲಗಳಿಗೆ ಸಮವಸ್ತ್ರ ಮತ್ತು ಮೈಸೂರು ಪೇಟಾವನ್ನು ಸೇಫ್ ವೀಲ್ಸ್ ಟ್ರಾವೆಲ್ಸ್‌ನ ಮಾಲೀಕ ಪ್ರಶಾಂತ್ ಅವರು ನೀಡುತ್ತಾರೆ. ಪ್ರವಾಸಿಗರು ಟಾಂಗಾದಲ್ಲಿ ನಗರ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಟಾಂಗಾ ಮತ್ತು ಸಾರೋಟು ಪ್ರಯಾಣಕ್ಕೆ ದರವನ್ನು ಶೀಘ್ರದಲ್ಲೆ ಗೊತ್ತುಪಡಿಸಲಾಗುವುದು ಎಂದು ತಿಳಿಸಿದರು.
ವಿದೇಶಗಳಿಂದ 20 ತಂಡ ದಸರಾ ವೀಕ್ಷಣೆ ಬರಲಿವೆ. ಪ್ರತಿ ತಂಡದಲ್ಲಿ 12ರಿಂದ 20 ಮಂದಿ ವಿದೇಶಿಯರು ಇರುತ್ತಾರೆ. ಇವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುವುದು ಎಂದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಶಿವಲಿಂಗಪ್ಪ, ಸಮಿತಿ ಉಪಾಧ್ಯಕ್ಷ ಪ್ರಶಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT