ಗೋಣಿಕೊಪ್ಪಲು: ಹಿರಿಯರು ಆಚರಿಸಿಕೊಂಡು ಬಂದಿರುವ ಸಂಪ್ರದಾಯ ಸಂಸ್ಕೃತಿ, ಆಚಾರ ವಿಚಾರಗಳನ್ನು ಮುಂದುವರಿಸಿಕೊಂಡು ಬರುವುದಕ್ಕೆ ದಸರಾದಂತಹ ಉತ್ಸವಗಳು ನೆರವಾಗುತ್ತವೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅರುಣ್ ಭೀಮಯ್ಯ ಹೇಳಿದರು.
ಕಾವೇರಿ ದಸರಾ ಸಮಿತಿಯ ಮೊದಲ ದಿನದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಉಪಾಧ್ಯಕ್ಷೆ ತೀತಿರ ಊರ್ಮಿಳಾ ಮಾತನಾಡಿ ಬದುಕಿನ ಬವಣೆಯ ನಡುವೆ ಒಂದಿಷ್ಟು ಮನೋರಂಜನೆ ಅನುಭವಿಸಲು ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ನೆರವಾಗಲಿದೆ ಎಂದರು.
ಸದಸ್ಯೆ ಹಬೀಬುನ್ನೀಸ ಮಾತನಾಡಿದರು. ವೇದಿಕೆ ಸವಿತಿ ಸಂಚಾಲಕ ಬಾಲಕೃಷ್ಣ ರೈ, ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬೋಜಮ್ಮ, ದಸರಾ ಸಮಿತಿ ಕೋಶಾಧಿಕಾರಿ ಸುಬ್ರಮಣಿ ಹಾಜರಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ ಸ್ವಾಗತಿಸಿದರು.
ಆರಂಭದಲ್ಲಿ ನಡೆದ ಸ್ಥಳೀಯ ಕಲಾವಿದರ ಭಜನೆ ಕಾರ್ಯಕ್ರಮ ಉತ್ತಮವಾಗಿತ್ತು. ಹಿರಿಯ ಗಾಯಕರಾದ ರಾಮಚಾರಿ, ಡಾ.ಕೆ.ಕೆ.ಶಿವಪ್ಪ, ಸುಮಿ ಸುಬ್ಬಯ್ಯ, ಯಶೋಧ ಚಂದ್ರಶೇಖರ್, ರಾಮೇಗೌಡ ಮೊದಲಾದವರು ನಡೆಸಿಕೊಟ್ಟರು.
ಸಭಾ ಕಾರ್ಯಕ್ರಮದ ನಂತರ ನಡೆದ ಡ್ಯಾನ್ಸ್ ಮೇಳ ಹಾಗೂ ಕೊಡವ ಸಂಗೀತ ರಸಮಂಜರಿ ಪ್ರೇಕ್ಷಕರನ್ನು ರಂಜಿಸಿತು.