ಕೆ.ಆರ್.ನಗರ: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶಾಖಾ ಮಠದ ವತಿಯಿಂದ ಹಮ್ಮಿಕೊಂಡ ದಸರಾ ಮಹೋತ್ಸವಕ್ಕೆ ಇಲ್ಲಿನ ಡಾ.ಅಂಬೇಡ್ಕರ್ ಪುತ್ಥಳಿ ಬಳಿ ಶಿವಾನಂದಪುರಿ ಸ್ವಾಮೀಜಿ ಸೋಮವಾರ ಚಾಲನೆ ನೀಡಿದರು.
ಗಂಗಾ ಪೂಜೆ ಹಾಗೂ ಬಸವ ಪೂಜೆ ನೆರವೇರಿಸುವ ಮೂಲಕ ಶ್ರೀಗಳು ನವರಾತ್ರಿ ಉತ್ಸವದ ಮೆರವಣಿಗೆಯನ್ನು ಉದ್ಘಾಟಿಸಿದರು. ಪೂರ್ಣಕುಂಭ ಹೊತ್ತ 101 ಮಹಿಳೆಯರು, ಪುಜಾ ಕುಣಿತ, ವೀರಭದ್ರ ಕುಣಿತ, ಡೊಳ್ಳು ಕುಣಿತ, ಕಂಸಾಳೆ, ತಮಟೆ ವಾದ್ಯದೊಂದಿಗೆ ಮೈಸೂರು- ಹಾಸನ ರಸ್ತೆ ಮೂಲಕ ಸಂಚರಿಸಿದ ಮೆರವಣಿಗೆ, ಕನಕ ಗುರುಪೀಠ ಶಾಖಾ ಮಠದವರೆಗೆ ಸಾಗಿತು. ಮಠದಲ್ಲಿ ಸಂಜೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಅಪಾರ ಭಕ್ತರು ಮಠದ ಆವರಣದಲ್ಲಿ ಸೇರಿದ್ದರು.
ಬಿಜೆಪಿ ಮುಖಂಡ ದೊಡ್ಡಸ್ವಾಮೇಗೌಡ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ವಿ. ದೇವರಹಟ್ಟಿ, ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಜಿ.ಎನ್. ಮಲ್ಲೇಗೌಡ, ಕನಕ ನೌಕರರ ಸಂಘದ ಅಧ್ಯಕ್ಷ ಎಸ್.ಎಂ. ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಆರ್. ರಾಮೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಚೀರ್ನಹಳ್ಳಿ ಉಮೇಶ್, ಕಾಳಿದಾಸ ಯುವ ಸೇನೆ ಕಾರ್ಯದರ್ಶಿ ಜಗದೀಶ್, ಎಪಿಎಂಸಿ ಮಾಜಿ ನಿರ್ದೇಶಕ ಹೆಬ್ಬಾಳು ಶೇಖರ್, ಪುರಸಭೆ ಆಶ್ರಯ ಸಮಿತಿ ಸದಸ್ಯ ನಟರಾಜ್, ಗುತ್ತಿಗೆದಾರ ಚೀರ್ನಹಳ್ಳಿ ಶಿವಣ್ಣ, ದಿಡ್ಡಹಳ್ಳಿ ಬಸವರಾಜು, ಕನಕರಾಜು ಇತರರು ಮೆರವಣೀಗೆಯ ಮುಂದಾಳತ್ವ ವಹಿಸಿದ್ದರು.