ಮೈಸೂರು: ಧಾರವಾಡದ ಭಾರತೀಯ ಕ್ರೀಡಾ ಪ್ರಾಧಿಕಾರದ ಎಂ. ನಾಗರಾಜ್ ಮತ್ತು ದೆಹಲಿಯ ರೇಖಾ ನರವಾಲ್ ಸೋಮವಾರ ಮುಕ್ತಾಯವಾದ ದಸರಾ ಮಹೋತ್ಸವದ ರಾಷ್ಟ್ರಮಟ್ಟದ ಆಹ್ವಾನಿತ ಕುಸ್ತಿ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗಗಳ ಅತ್ಯುತ್ತಮ ಕುಸ್ತಿಪಟುಗಳ ಗೌರವ ಗಳಿಸಿದರು.
ದಸರಾ ಕುಸ್ತಿ ಉಪಸಮಿತಿ ಆಶ್ರಯದಲ್ಲಿ ಡಿ. ದೇವರಾಜ್ ಅರಸ್ ವಿವಿಧೋದ್ದೇಶ ಕ್ರೀಡಾಂಗಣದ ಆಖಾಡಾದಲ್ಲಿ ನಡೆದ ಟೂರ್ನಿಯ ದಸರಾ ಕುಮಾರ ಪ್ರಶಸ್ತಿ ಗೆದ್ದಿದ್ದ ನಾಗರಾಜ್, ಪಾಯಿಂಟ್ ಕುಸ್ತಿಯ ಅತ್ಯುತ್ತಮ ಕುಸ್ತಿಪಟುವಾಗಿಯೂ ಹೊರಹೊಮ್ಮಿದರು.
ಮಹಿಳೆಯರ ವಿಭಾಗಗಳ ಸುತ್ತುಗಳಲ್ಲಿ ಮೇಲುಗೈ ಸಾಧಿಸಿದ ದೆಹಲಿಯ ರೇಖಾ ನರವಾಲ್ ಅತ್ಯುತ್ಯುಮ ಕುಸ್ತಿಪಟು ಪ್ರಶಸ್ತಿ ಗಳಿಸಿದರು. ರಾಜ್ಯಮಟ್ಟದ ಮ್ಯಾಟ್ ಕುಸ್ತಿಯ ಮಹಿಳಾ ವಿಭಾಗದಲ್ಲಿ ಪ್ರೇಮಾ ಉಚ್ಚಣ್ಣವರ ಉತ್ತಮ ಕುಸ್ತಿಪಟು ಪ್ರಶಸ್ತಿ ಗೆದ್ದರು.
ಮೈಸೂರು ನಗರದ ಕುಸ್ತಿಪಟುಗಳಿಗಾಗಿ ಏರ್ಪಡಿಸಲಾಗಿದ್ದ ಕುಸ್ತಿ ಸ್ಪರ್ಧೆಯಲ್ಲಿ ವೆುಸೂರಿನ ಪೈಲ್ವಾನ್ ಕೆ. ಕುಮಾರ್ (ಮೇಯರ್ ಕಪ್) ಗ್ರಾಮೀಣ ಪೈಲ್ವಾನರ ವಿಭಾಗದಲ್ಲಿ ಬನ್ನೂರಿನ ಪೈಲ್ವಾನ್ ದಿಲೀಪ್ ಸಾಹುಕಾರ್ ಚೆನ್ನಯ್ಯ ಕಪ್ ಗೆದ್ದರು.