ಮಡಿಕೇರಿ: ಇತಿಹಾಸ ಪ್ರಸಿದ್ಧ ಮಡಿಕೇರಿ ದಸರಾ ಹೊಸ್ತಿಲಲ್ಲಿ ಬಂದು ನಿಂತಿದೆ. ಅದಕ್ಕಾಗಿ ಹಲವು ಸಿದ್ಧತೆಗಳು ಈಗಾಗಲೇ ನಡೆದಿವೆ. ಆದರೆ, ಅತಿ ಮುಖ್ಯವಾಗಿ ನಡೆಯಬೇಕಾದ ರಸ್ತೆ ದುರಸ್ತಿ ಕಾರ್ಯ ಇದುವರೆಗೆ ಆರಂಭವಾಗಿಲ್ಲ.
ಕಳೆದ ನಾಲ್ಕು ತಿಂಗಳಿನಿಂದ ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಹಾಳಾಗಿವೆ. ಯಾವುದೇ ವಾಹನಗಳು ಚಲಿಸಲು ಯೋಗ್ಯವಾಗಿಲ್ಲ. ಇದೇ ರಸ್ತೆಗಳಲ್ಲಿ ದಶಮಂಟಪಗಳ ಮೆರವಣಿಗೆ ಕೂಡ ಸಾಗಬೇಕಾಗಿದೆ. ಹಾಗಾಗಿ ಸಾಧ್ಯವಾದಷ್ಟು ಬೇಗನೇ ಈ ರಸ್ತೆಗಳನ್ನು ದುರಸ್ತಿಗೊಳಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಮುಖ್ಯವಾಗಿ ಕಾಲೇಜು ರಸ್ತೆ, ಕಾನ್ವೆಂಟ್ ಜಂಕ್ಷನ್ ಬಳಿ, ಚೌಕಿ, ದೇವಸ್ಥಾನ ರಸ್ತೆಯಲ್ಲಿ ಗುಂಡಿಗಳು ಬಿದ್ದು, ಹಾಳಾಗಿವೆ.
ಮಡಿಕೇರಿ ದಸರಾದ ಪ್ರಮುಖ ಆಕರ್ಷಣೀಯವಾಗಿರುವ ದಶಮಂಟಪಗಳ ಮೆರವಣಿಗೆಯನ್ನು ವೀಕ್ಷಿಸಲೆಂದು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಮೈಸೂರಿನ ಜಂಬೂ ಸವಾರಿಯನ್ನು ನೋಡಿಕೊಂಡು ರಾತ್ರಿ ವೇಳೆಗೆ ಮಡಿಕೇರಿಗೆ ಆಗಮಿಸಿ, ದಶಮಂಟಪ ಮೆರವಣಿಗೆಯನ್ನು ವೀಕ್ಷಿಸುವುದು ವಾಡಿಕೆಯಾಗಿದೆ.
ಅದರಂತೆ ಪ್ರತಿವರ್ಷ ದಸರಾ ವೀಕ್ಷಣೆಗೆ ಆಗಮಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ರಸ್ತೆಗಳು ಸುಸ್ಥಿತಿಯಲ್ಲಿರಲಿ ಎನ್ನುವುದು ವಾಹನ ಚಾಲಕರ ಬಯಕೆಯಾಗಿದೆ. ಉತ್ತಮ ರಸ್ತೆ ವ್ಯವಸ್ಥೆಯಿದ್ದರೆ, ಜಿಲ್ಲೆಗೂ ಒಳ್ಳೆಯ ಹೆಸರು ಬರುತ್ತದೆ. ಹೀಗಾಗಿ ಪ್ರವಾಸೋದ್ಯಮದ ಬೆಳವಣಿಗೆಗೂ ಸಹಕಾರಿಯಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇತ್ತ ಜನಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಯ ಆಡಳಿತಾಧಿಕಾರಿಗಳು ಗಮನ ಹರಿಸಬೇಕಾಗಿದೆ ಎಂದು ನಾಗರಿಕರು ಮನವಿ ಮಾಡಿಕೊಂಡಿದ್ದಾರೆ.