ಮೈಸೂರು: ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 6 ರವರೆಗೆ ನಡೆಯಲಿರುವ ದಸರಾ ಮಹೋತ್ಸವಕ್ಕೆ ಬಿಗಿ ಭದ್ರತೆ ವ್ಯವಸ್ಥೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.
ಗುರುವಾರ ದಸರಾ ಸಮಿತಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವದೆಹಲಿಯಲ್ಲಿ ಈಚೆಗೆ ನಡೆದ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಮೈಸೂರಿಗೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಜ್ಯ ಗುಪ್ತಚರ ದಳದ ಐಜಿಯವರಿಗೆ ಸೂಚಿಸಲಾಗಿದೆ.
ವರದಿ ಸಿಕ್ಕ ನಂತರ ಕೇಂದ್ರ ಗೃಹ ಸಚಿವರೊಂದಿಗೆ ಚರ್ಚಿಸಿ, ಕೇಂದ್ರ ಗುಪ್ತಚರ ವಿಭಾಗದಲ್ಲಿರುವ ಮಾಹಿತಿಯನ್ನೂ ಪಡೆಯಲಾಗುವುದು~ ಎಂದು ತಿಳಿಸಿದರು. `ನಾಡಹಬ್ಬವನ್ನು ಶಾಂತಿ ಮತ್ತು ಸುರಕ್ಷಿತವಾಗಿ ಆಚರಿಸಲು ಎಲ್ಲ ಕ್ರಮಗಳನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳಬೇಕು.
ಒಂದು ಸಣ್ಣ ತಪ್ಪು ಕೂಡ ಆಗಬಾರದು. ಎಂತಹ ಪರಿಸ್ಥಿತಿಯನ್ನೂ ಎದುರಿಸಲು ನಾವು ಸಿದ್ಧ ಇರಬೇಕು~. `ಈ ಬಾರಿ ದಸರಾ ಮಹೋತ್ಸವಕ್ಕೆ ರೂ 10 ಕೋಟಿ ನೀಡಲಾಗುತ್ತಿದೆ. ಈಗಾಗಲೇ 6 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಉತ್ಸವಕ್ಕೆ ಹಣದ ಕೊರತೆಯಿಲ್ಲ~ ಎಂದರು.