ಕುಶಾಲನಗರ: ಮೈಸೂರು ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕೊಡಗಿನ ದುಬಾರೆ ಸಾಕಾನೆ ಶಿಬಿರದ ಗೋಪಿ ಹಾಗೂ ಪ್ರಶಾಂತ ಎಂಬ ಸಾಕಾನೆಗಳನ್ನು ಶನಿವಾರ ಮೈಸೂರಿಗೆ ಬೀಳ್ಕೊಡಲಾಯಿತು.
ಆನೆಕಾಡು ಮೀಸಲು ಅರಣ್ಯ ಶಿಬಿರದಿಂದ ಗೋಪಿ ಮತ್ತು ಪ್ರಶಾಂತ್ ಸಾಕಾನೆಗಳನ್ನು ಅರಣ್ಯ ಇಲಾಖೆ ಲಾರಿಯಲ್ಲಿ ಸಾಗಿಸಿತು.
ಕುಶಾಲನಗರ ವಲಯ ಅರಣ್ಯಾಧಿಕಾರಿ ಎಂ.ಎಂ.ಅಚ್ಚಪ್ಪ ಸಾಕಾನೆಗಳಿಗೆ ಸಾಂಪ್ರದಾಯಿಕವಾಗಿ ಬೀಳ್ಕೊಟ್ಟರು. ಅರಣ್ಯ ರಕ್ಷಕರಾದ ಪಾಲಾಕ್ಷ, ವಿಜಯ್ಕುಮಾರ್, ವನಪಾಲಕರಾದ ಮಾದನಾಯ್ಕ ಇದ್ದರು.
ಆನೆಗಳೊಂದಿಗೆ ಗೋಪಿ ಆನೆಯ ಮಾವುತ ಶರಿ, ಕಾವಾಡಿ ರಾಜಣ್ಣ, ಪ್ರಶಾಂತ್ ಆನೆಯ ಮಾವುತ ರಾಜು, ಕಾವಾಡಿ ಚಂದ್ರ ತೆರಳಿದರು. ಗೋಪಿ ಹಾಗೂ ಪ್ರಶಾಂತ್ ಸೇರಿದಂತೆ ದಸರಾದಲ್ಲಿ ದುಬಾರೆ ಸಾಕಾನೆ ಶಿಬಿರದ ಒಟ್ಟು 6 ಆನೆಗಳು ಭಾಗವಹಿಸಲಿವೆ. ಸಾಕಾನೆ ಗೋಪಿ ಕಳೆದ ವರ್ಷದಿಂದ ಮತ್ತು ಪ್ರಶಾಂತ್ ಕಳೆದ ಐದು ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.