ಮುಂಬೈ (ಪಿಟಿಐ): ಬಾಲಿವುಡ್ ನಟಿ ವಿದ್ಯಾ ಬಾಲನ್, ಶುಕ್ರವಾರ ಯುಟಿವಿ ಮುಖ್ಯಸ್ಥ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ವರಿಸಿದರು. ಸರಳ ವಿವಾಹ ಸಮಾರಂಭವು ಪಂಜಾಬಿ ಮತ್ತು ತಮಿಳು ಸಂಪ್ರದಾಯದಂತೆ ನೆರವೇರಿತು. ಬಾಂದ್ರಾದಲ್ಲಿರುವ ಅಲಂಕೃತ ಗ್ರೀನ್ ಮೈಲ್ ಬಂಗಲೆಯಲ್ಲಿ ನಡೆದ ಸಮಾರಂಭದಲ್ಲಿ ವಧು ಮತ್ತು ವರನ ಕುಟುಂಬದ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು.
`ಪಂಜಾಬಿ ಮತ್ತು ತಮಿಳು ಸಂಪ್ರದಾಯದಂತೆ ವಿವಾಹದ ಧಾರ್ಮಿಕ ವಿಧಾನಗಳು ನಡೆಯಿತು. ಭೋಜನಕ್ಕೆ ದಕ್ಷಿಣ ಭಾರತ ಶೈಲಿ ಊಟದ ವ್ಯವಸ್ಥೆ ಮಾಡಲಾಗಿತ್ತು' ಎಂದು ವಿದ್ಯಾ ಬಾಲನ್ ಅವರ ಆಪ್ತ ಮೂಲಗಳು ಹೇಳಿವೆ.
ನವದಂಪತಿ ಚೆನ್ನೈನಲ್ಲಿ ಆರತಕ್ಷತೆ ಹಮ್ಮಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಕೇರಳ ಮೂಲದವರಾದ ವಿದ್ಯಾ ಬಾಲನ್ 2005ರಲ್ಲಿ `ಪರಿಣಿತಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ್ದರು.