ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ಪ್ರವಾಹ ಮುಂದುವರೆದಿದ್ದು ಜಲಾಶಯದಿಂದ ಗುರುವಾರ ದಾಖಲೆಯ 97282 ನೀರನ್ನು ಹರಿದು ಬಿಡಲಾಗಿದೆ.
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯದ ಒಳಹರಿವು ಭಾರಿ ಪ್ರಮಾಣದಲ್ಲಿ ಮತ್ತೆ ವೃದ್ಧಿಯಾಗಿದ್ದು ತೆರೆದ 28 ಗೇಟ್ಗಳಿಂದ ಮತ್ತಷ್ಟು ಮೇಲೆತ್ತುವ ಮೂಲಕ ನೀರನ್ನು ರಾತ್ರಿಯಿಂದಲೇ ನದಿಗೆ ಹರಿಬಿಡಲಾಗಿದೆ, 20 ಗೇಟ್ಗಳನ್ನು 2.5ಅಡಿ ಎತ್ತುವ ಮೂಲಕ 8 ಗೇಟ್ಗಳನ್ನು 1.5 ಅಡಿ ಎತ್ತುವ ಮೂಲಕ ಒಟ್ಟಾರೆ 86456 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ.
ವಿದ್ಯುತ್ ಉತ್ಪಾದನೆ ಸೇರಿದಂತೆ ಒಟ್ಟು 89624 ಕ್ಯೂಸೆಕ್ ನೀರನ್ನು ನದಿಗೆ ಅಲ್ಲದೆ ಕಾಲುವೆಗಳಿಗೆ 7658 ಕ್ಯೂಸೆಕ್ ನೀರನ್ನು ಬಿಡಲಾಗಿದೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ನದಿ ಪಾತ್ರದ ಅನೇಕ ಮಹತ್ವದ ಐತಿಹಾಸಿಕ ಸ್ಮಾರಕಗಳು ಪ್ರಮುಖವಾಗಿ ಪುರಂದರ ಮಂಟಪ ಸೇರಿದಂತೆ ಅನೇಕ ಸ್ಮಾರಕಗಳು ಜಲಾವೃತವೂ ಮುಂದುವರೆದಿದೆ.
ವಿರೂಪಾಕ್ಷೇಶ್ವರ ದೇವಾಲಯದ ಪಕ್ಕದಿಂದ ವಿರೂಪಾಪುರ ಗಡ್ಡೆ ಹಾಗೂ ತಳವಾರಘಟದಿಂದ ಆನೆಗುಂದಿಗೆ ಹೋಗುವ ದೋಣಿ ಪ್ರಯಾಣ ಸೇರಿದಂತೆ ನದಿಗೆ ಇಳಿಯದಂತೆ ಕಂದಾಯ ಇಲಾಖಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪೊಲೀಸ್ ಹಾಗೂ ಕಂದಾಯ ಇಲಾಖಾಧಿಕಾರಿಗಳು ಸಂಚಾರ ನಿರ್ಬಂಧಿಸಿದ್ದಾರೆ.