ಬೆಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕೆಂದು ಅಪಾರ ಹಣ ಖರ್ಚುಮಾಡಿ ಮೇಲು ಸೇತುವೆಗಳನ್ನು ನಿರ್ಮಿಸಿರುವುದು ಸರಿಯಷ್ಟೆ. ಆದರೆ ಮೇಲುಸೇತುವೆಗಳ ಮೇಲಿನ ಕವಲು ದಾರಿಗಳಿಗೆ ಸರಿಯಾದ ಮಾರ್ಗಸೂಚಿಗಳಿಲ್ಲದೆ ವಾಹನ ಸವಾರರು ಪರದಾಡುವಂತಾಗಿದೆ. ಒಂದು ಸಾರಿ ಮಾರ್ಗ ತಪ್ಪಿದರೆ ಅದೆಷ್ಟೋ ದೂರ ಚಲಿಸಿ ಸುತ್ತಿ ಬಳಸಿ ಬೇಕಾದ ಮಾರ್ಗಕ್ಕೆ ಬರಲು ಶ್ರಮಪಡಬೇಕಾಗುತ್ತದೆ. ಎಲ್ಲಾ ಮೇಲು ಸೇತುವೆಗಳ ಮೇಲೂ ಇದೇ ಗೋಳು.
ಇಂದಿನ ಸಂಚಾರದೊತ್ತಡದಲ್ಲಿ ದೊಡ್ಡ ವಾಹನದಿಂದ ಚಲಿಸುವ ಕಾರು ಅಥವಾ ದ್ವಿಚಕ್ರದ ಸವಾರರಿಗೆ ಮಾರ್ಗಸೂಚಿ ಫಲಕಗಳು ಕಾಣುವುದೇ ಇಲ್ಲ.
ಅಂತಹ ಸಮಯದಲ್ಲಿ ಸವಾರ ಮಾರ್ಗ ತಪ್ಪುವುದು ಸಾಮಾನ್ಯ. ಇದರಿಂದ ಹೆಚ್ಚಿನ ಕಾಲಹರಣ, ದುಬಾರಿ ಇಂಧನ ವ್ಯಯ ಅಧಿಕ ಸಂಚಾರದೊತ್ತಡ, ನಗರದಲ್ಲಿ ಹುಟ್ಟಿ ಬೆಳೆದವರಿಗೇ ಹೀಗಾದರೆ ಇನ್ನು ಹೊರಗಿನಿಂದ ಬರುವ ಚಾಲಕರ ಗತಿ ಏನು?ಮೇಲುಸೇತುವೆಗಳ ಮೇಲಿನ ಕವಲು ದಾರಿಗಳಿಗೆ ಮಾರ್ಗಸೂಚಿ ಫಲಕಗಳನ್ನು ಅಳವಡಿಸಬೇಕು. ವಾಹನ ಸವಾರರಿಗೆ ದೂರಕ್ಕೆ ಸ್ಪಷ್ಟವಾಗಿ ಕಾಣುವಂತೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸರಳ ಅಕ್ಷರಗಳಲ್ಲಿ ನಮೂದಿಸುವಂತೆ ಸಂಬಂಧಪಟ್ಟವರಲ್ಲಿ ಮನವಿ ಮಾಡುತ್ತೇನೆ.
ಯಮಲೂರು ಎಂ. ವೆಂಕಟಪ್ಪ