ಕೃಷ್ಣರಾಜಪುರ: `ಸಮಾಜಕ್ಕೆ ಬುದ್ಧ, ಅಂಬೇಡ್ಕರ್ ಅವರಂತಹ ದಾರ್ಶನಿಕರ ಕೊಡುಗೆ ಅಪಾರ. ಅವರ ಆದರ್ಶಗಳನ್ನು ಯುವ ಪೀಳಿಗೆ ಮೈಗೂಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ~ ಎಂದು ಬಿಬಿಎಂಪಿ ಸದಸ್ಯ ಬೈರತಿ ಎನ್.ಬಸವರಾಜ್ ಅವರು ಪ್ರತಿಪಾದಿಸಿದರು.
ದೂರವಾಣಿ ನಗರ ವಿದ್ಯಾಮಂದಿರದ ಬಯಲು ರಂಗಮಂದಿರದಲ್ಲಿ ಕರ್ನಾಟಕ ದಲಿತ ಜ್ಞಾನ ಭಾರತಿ ವತಿಯಿಂದ ಏರ್ಪಡಿಸಿದ್ದ ಸಂಘದ ವಾರ್ಷಿಕೋತ್ಸವ, ಬುದ್ಧ ಹಾಗೂ ಅಂಬೇಡ್ಕರ್ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
`ಅಶಾಂತಿ, ಅರಾಜಕತೆ, ದೌರ್ಜನ್ಯ ಎಲ್ಲೆಡೆ ಹೆಚ್ಚುತ್ತಿದ್ದು ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ. ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಬುದ್ಧ, ಅಂಬೇಡ್ಕರ್ ಹಾಗೂ ಬಸವೇಶ್ವರರು ತಮ್ಮ ಜೀವನವನ್ನು ಮುಡಿಪಾಗಿರಿಸಿದರು. ಆದರೆ, ಈ ಮಹನೀಯರ ಆಚರಣೆಯಲ್ಲಿ ತೋರುವ ಸಂಭ್ರಮ, ಅವರ ತತ್ವಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದರಲ್ಲಿ ಕಾಣುತ್ತಿಲ್ಲ~ ಎಂದು ವಿಷಾದಿಸಿದರು.
ಅಂತರರಾಷ್ಟ್ರೀಯ ಬುದ್ಧ ಸ್ನೇಹ ಕೂಟದ ಕಾರ್ಯದರ್ಶಿ ಡಾ.ಎಚ್.ಆರ್. ಸುರೇಂದ್ರ ಮಾತನಾಡಿ, `ಶೋಷಿತರ ಧ್ವನಿಯಾಗಿ ಜೀವನದ ಉದ್ದಕ್ಕೂ ಹೋರಾಟ ನಡೆಸಿದ ಅಂಬೇಡ್ಕರ್ ಅವರು ಪರಿವರ್ತನೆ ಬಯಸಿ ಕೊನೆಗೆ ಬೌದ್ಧ ಧರ್ಮ ಸ್ವೀಕರಿಸಿದರು. ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು ಮುಂದೆ ಬಂದವರು ಕೆಳಸ್ತರದಲ್ಲಿರುವವರಿಗೆ ಮಾರ್ಗದರ್ಶನ ನೀಡಬೇಕು~ ಎಂದು ಸಲಹೆ ಮಾಡಿದರು.
ಹೊಲೆಯ ಮಾದಿಗರ ಮಹಾಸಭೆಯ ರಾಜ್ಯ ಘಟಕದ ಅಧ್ಯಕ್ಷ ದೊಡ್ಡಮನಿ ದಶರತ್ ಮಾತನಾಡಿದರು. ಬೆಂಗಳೂರು ಸ್ಫೂರ್ತಿ ಧಾಮದ ಎಸ್.ಧಮ್ಮಾನಂದ ಬಂತೇಜಿ, ಹೊಲೆಯ-ಮಾದಿಗರ ಸಂಘದ ಕಾರ್ಯದರ್ಶಿ ರಾಜಶೇಖರ್, ದಲಿತ ಜ್ಞಾನ ಭಾರತಿ ಸಂಘದ ಅಧ್ಯಕ್ಷ ಜೆ.ಸಿ.ಪ್ರಕಾಶ್, ಸಾಮಾಜಿಕ ಕಾರ್ಯಕರ್ತ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾಮಂದಿರದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.