ನಾಪೋಕ್ಲು: ಸಮಾಜದಲ್ಲಿ ಜಾತಿ, ಧರ್ಮ, ಹಣದ ಅಂತಸ್ತಿನ ಮೇಲೆ ಪ್ರತಿಯೊಬ್ಬರೂ ತಮ್ಮನ್ನು ತಾವು ಬೇರ್ಪಡಿಸಿಕೊಳ್ಳುತ್ತಿರುವುದರಿಂದ ಮಾನವೀಯ ಮೌಲ್ಯಗಳು ಕಣ್ಮರೆ ಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದಾರ್ಶನಿಕರ ಜಯಂತಿ ಆಚರಣೆಗಳು ಅವಶ್ಯಕ ಎಂದು ಮೂರ್ನಾಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಬಿ.ಎಂ. ಸರಸ್ವತಿ ಹೇಳಿದರು.
ಸಮೀಪದ ಮೂರ್ನಾಡಿನ ಪದವಿಪೂರ್ವ ಕಾಲೇಜಿನ ಕಾವೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕನಕ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, 500 ವರ್ಷಗಳ ಹಿಂದಿನ ಕನಕದಾಸರ ಕೀರ್ತನೆಗಳು ಪ್ರಸ್ತುತ ಸಮಾಜಕ್ಕೂ ದಾರಿ ದೀಪದಂತಿವೆ ಎಂದರು.
ಕನ್ನಡ ಉಪನ್ಯಾಸಕಿ ದಮಯಂತಿ `ಕನಕದಾಸರ ಜೀವನ ಚರಿತ್ರೆ ಹಾಗೂ ತತ್ವಗಳ' ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಗಳನ್ನು ಹಾಡಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಎಂ.ಬಿ. ಪುಟ್ಟಣ್ಣ, ಅನುರಾಧ, ಕಲಾವತಿ, ಗೀತಾ, ಕುಮುದ, ಮಾಲತಿ, ಹೇಮಾವತಿ, ಸೀಮಾ, ರೋಷನ್, ರೋಹಿಣಿ ಹಾಗೂ ನಂದಿನಿ ಇದ್ದರು.