ದಾವಣಗೆರೆ: ಅದು ವಿಜಯೋತ್ಸವದ ಕಹಳೆ. ಚಿತ್ರದುರ್ಗದ ಕಲಾವಿದರು ಮೊಳಗಿಸಿದ ಆ ಧ್ವನಿ ಶನಿವಾರ ಆರಂಭವಾದ ಜಿಲ್ಲಾ ಉತ್ಸವಕ್ಕೆ ವಿಜಯದ ಕಳೆ ತಂದಿತು.
ಮೆರವಣಿಗೆ ಮುಂಭಾಗದಲ್ಲಿ ಸಿರಿಗೆರೆ ಮಠದ ಆನೆಯ ಗಾಂಭೀರ್ಯದ ಹೆಜ್ಜೆ, ದಾವಣಗೆರೆಯ ಕುದುರೆಗಳ ನಡಿಗೆ, ಬಸಾಪುರದ ನಂದಿಕೋಲು ಕುಣಿತ, ಧಾರವಾಡದ ಜಗ್ಗಲಿಗೆ, ಕುಂಕುವಾ ಕಲಾವಿದರ ಪುರವಂತಿಗೆ, ಹರಪನಹಳ್ಳಿ ಕಲಾವಿದರ ಕೋಲಾಟ, ಹೊನ್ನಾಳಿಯ ಕೀಲುಕುದುರೆ, ಕಲಘಟಗಿಯ ಕರಡಿ ಮಜಲು, ಹುಲ್ಲೂರು ಮಹಿಳೆಯರ ತಮಟೆ ವಾದನ, ಭಾನುವಳ್ಳಿಯ ಡೊಳ್ಳುಕುಣಿತ, ಚಾಮರಾಜನಗರದ ಗೊರವರ ಕುಣಿತ ಮೆರವಣಿಗೆಯ ಮೆರುಗು ಹೆಚ್ಚಿಸಿದವು.
ಅಲಂಕೃತ ಬಂಡಿ, ವಿವಿಧ ಇಲಾಖೆಗಳು, ಸಂಘಗಳ ಸ್ತಬ್ಧಚಿತ್ರ, ಪೊಲೀಸ್ ಬ್ಯಾಂಡ್ಸೆಟ್, ಎನ್ಸಿಸಿ ವಿದ್ಯಾರ್ಥಿಗಳ ನಡಿಗೆ, ಲಮಾಣಿ ಮಹಿಳೆಯರ ಸಾಂಸ್ಕೃತಿಕ ನರ್ತನ ಗಮನ ಸೆಳೆದವು.
ನಗರದ ದುರ್ಗಾಂಬಿಕಾ ದೇವಿಯ ಸನ್ನಿಧಿಯಲ್ಲಿ ಮಧ್ಯಾಹ್ನ 2.45ಕ್ಕೆ ಸರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಡೊಳ್ಳು ಬಾರಿಸವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ದುರ್ಗಾಂಬಿಕಾ ದೇವಸ್ಥಾನದಿಂದ ಹೊರಟ ಮೆರವಣಿಗೆ ಹೊಂಡದ ಸರ್ಕಲ್, ಜಯದೇವ ವೃತ್ತ, ಪಿ.ಬಿ. ರಸ್ತೆ ಮೂಲಕ ಸಾಗಿ ಪ್ರೌಢಶಾಲಾ ಮೈದಾನ ತಲುಪಿತು.
ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಂ. ಬಸವರಾಜನಾಯ್ಕ, ಚಂದ್ರಕಾಂತ ಬೆಲ್ಲದ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವೀರೇಶ್, ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ್, ತಹಶೀಲ್ದಾರ್ ಡಾ.ಬಿ.ಆರ್. ಹರೀಶ್, ಶೈಲಜಾ ಪ್ರಿಯದರ್ಶಿನಿ, ಜಿ. ನಜ್ಮಾ, ಡಿವೈಎಸ್ಪಿ ಕೆ.ಪಿ. ಚಂದ್ರಪ್ಪ, ಕಲಾವಿದ ಬಾರಕೇರ ಕರಿಯಪ್ಪ, ವಿವಿಧ ಸಂಘಟನೆಗಳ ಮುಖಂಡರಾದ ಕೆ.ಜಿ. ಯಲ್ಲಪ್ಪ, ಅತ್ತಿಗೆರೆ ಮಂಜುನಾಥ್, ಕಲಾವಿದ ಮಾಗಾನಹಳ್ಳಿ ಮಂಜುನಾಥ್, ಜಯರಾಮ್ ಸಿಪಿಐ ಎಚ್.ಕೆ. ರೇವಣ್ಣ ಮತ್ತಿತರರು ಹಾಜರಿದ್ದರು.