ಶಿರಸಿ: ತಾಲ್ಲೂಕಿನ ಬನವಾಸಿಯಿಂದ ಮಳಗಿಗೆ ತಲುಪುವ ರಸ್ತೆಯಲ್ಲಿ ನಡುವೆ ಇರುವ ದಾಸನಕಟ್ಟೆ ಕೆರೆ ಏರಿಯ ಮೇಲೆ ರಸ್ತೆ ಅಭದ್ರವಾಗಿದ್ದು, ಆದಷ್ಟು ಶೀಘ್ರ ದುರಸ್ತಿಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೆರೆಯ ಏರಿಯ ಮೇಲೆ ಹಾದು ಹೋಗುವ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ದಾಸನಕಟ್ಟೆ ಕೆರೆ ಏರಿಯ ಮೇಲೆ ಈ ರಸ್ತೆಗೆ ಯಾವುದೇ ಭದ್ರತೆ ಇಲ್ಲವಾಗಿದೆ. ಕೆರೆ ಏರಿಯ ಮೇಲೆ ನಿರ್ಮಾಣ ಮಾಡಿರುವ ರಸ್ತೆಯಲ್ಲಿ ಎರಡು ವಾಹನಗಳು ಸಾಗುವಾಗ ಬದಿಯಲ್ಲಿ ತುಸು ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಡಾಂಬರ್ ರಸ್ತೆಯಿಂದ ಕೆಳಗೆ ಮಣ್ಣು ಕುಸಿದಿದ್ದು, ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದ ಇಂತಹ ಸ್ಥಳಗಳಲ್ಲಿ ರಾತ್ರಿ ವೇಳೆ ಅವಘಡ ಸಂಭವಿಸುವ ಮೊದಲು ಸಂಬಂಧಿತ ಇಲಾಖೆ ಇದನ್ನು ದುರಸ್ತಿಗೊಳಿಸಬೇಕು ಎಂದು ಸ್ಥಳೀಯ ಈರಪ್ಪ ನಾಯ್ಕ ಆಗ್ರಹಿಸಿದ್ದಾರೆ.
ಈ ಭಾಗದ ಕಾಳಂಗಿ–ಸಂತೊಳ್ಳಿ ರಸ್ತೆಯಲ್ಲಿ ಮಳೆಗಾಲದ ವೇಳೆ ರಸ್ತೆಯ ಮೇಲೆ ಮರವೊಂದು ಮುರಿದು ಬಿದ್ದಿತ್ತು. ರಸ್ತೆ ತೆರವುಗೊಳಿಸುವಾಗ ವಾಹನ ಸಂಚಾರಕ್ಕೆ ಅಗತ್ಯವಿರುವಷ್ಟು ಮಾತ್ರ ಮರದ ರೆಂಬೆ ಕಟಾವು ಮಾಡಲಾಗಿದೆ.