ಬಳ್ಳಾರಿ: ಹರಿದಾಸರು ರಚಿಸಿರುವ ದಾಸ ಸಾಹಿತ್ಯವು ಆದರ್ಶ ಜೀವನದ ಕೈಗನ್ನಡಿಯಾಗಿದೆ ಎಂದು ಸುವಿದ್ಯೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶ್ರೀಮಧ್ವ ಸಂಘವು ನಗರದ ಸತ್ಯನಾರಾಯಣ ಪೇಟೆಯ ಮಧ್ವ ಸದನದಲ್ಲಿ ಸೋಮವಾರ `ಪುರಂದರ ದಾಸರ ಮತ್ತು ಮಧ್ವ ನವರಾತ್ರಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 7 ದಿನಗಳ ಅವಧಿಯ ಜ್ಞಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪುರಂದರ ದಾಸರು ದಾಸ ಧೀಕ್ಷೆ ಸ್ವೀಕರಿಸುವ ಮುನ್ನ ಸಾಕಷ್ಟು ಹಣ ಸಂಪಾದಿಸಿದ್ದರು. ಆದರೆ, ಒಂದು ಸಣ್ಣ ಘಟನೆಯಿಂದ ಜೀವನದಲ್ಲಿ ಹಣ, ಆಸ್ತಿ ಮುಖ್ಯವಲ್ಲ ಎಂಬುದನ್ನು ಅರಿತು ಹರಿದಾಸರಾದರು ಎಂದು ಅವರು ಮಾರ್ಮಿಕವಾಗಿ ನುಡಿದರು.
ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯ ಎಂಬುದನ್ನು ತೋರಿಸಿಕೊಟ್ಟು, `ಕರ್ನಾಟಕ ಸಂಗೀತ ಪಿತಾಮಹ~ ಎನ್ನಿಸಿಕೊಂಡಿರುವ ಪುರಂದರ ದಾಸರು ರಚಿಸಿರುವ ನಾಲ್ಕು ಲಕ್ಷ ಕೃತಿಗಳ ಪೈಕಿ ಕೆಲವೊಂದು ಕೃತಿಗಳು ಮಾತ್ರ ಲಭ್ಯವಾಗಿದ್ದು, ಈ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಗಳು ಹರಿದಾಸರ ಕುರಿತು ಅಗತ್ಯ ಮಾಹಿತಿ ಸಂಗ್ರಹಿಸಿ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು ಎಂದು ಕೋರಿದರು.
ಮಕ್ಕಳಿಗೆ ಚಲನಚಿತ್ರ ಗೀತೆಗಳನ್ನು ಹಾಡುವಂತೆ ಒತ್ತಾಯಿಸುವ ಬದಲು ದಾಸ ಸಾಹಿತ್ಯದ ಕೀರ್ತನೆಗಳನ್ನು ಕಲಿಸಬೇಕು. ಇದರಿಂದ ಅವರ ಬುದ್ಧಿಶಕ್ತಿ ಹೆಚ್ಚಲಿದೆ ಎಂದು ಹೇಳಿದರು. ಮಧ್ವ ಸಂಘದ ವಿಜಯಸಿಂಹ, ಲಕ್ಷ್ಮಣ, ನಾರಾಯಣ ರಾವ್, ಲಕ್ಷ್ಮಿನಾರಾಯಣಾರ್ಯ, ಶ್ರೀನಿವಾಸ್, ಗೋಪಿನಾಥ್, ರಘುನಂದನ ಉಪಸ್ಥಿತರಿದ್ದರು.
ದಾಸರ ಆರಾಧನೆ: ನಗರದ ಶ್ರೀ ವ್ಯಾಸರಾಜರ ಮಠದಲ್ಲಿ ಪುರಂದರ ದಾಸರ ಆರಾಧನೆ ಅಂಗವಾಗಿ ರಜತ ರಥೋತ್ಸವ ಮತ್ತು ಭಜನೆ ಕಾರ್ಯಕ್ರಮ ಸೋಮವಾರ ನಡೆಯಿತು. ಶ್ರೀ ವ್ಯಾಸರಾಜ ಮಹಿಳಾ ಭಜನೆ ಮಂಡಳಿ ಸದಸ್ಯೆಯರಿಂದ ಸಂಗೀತ- ಗಾಯನ ನಡೆಯಿತು.
ಗಾಯನ ಸ್ಪರ್ಧೆ: ನಗರದ ಕೌಲ್ಬಜಾರ್ ಪ್ರದೇಶದ ಪಾಂಡುರಂಗ ದೇವಸ್ಥಾನದಲ್ಲಿ ಶ್ರೀ ವ್ಯಾಸರಾಜ ಸೇವಾ ಸಮಿತಿಯಿಂದ ಪುರಂದರ ದಾಸರ ಆರಾಧನೆ ನಡೆಯಿತು. ಸಮಿತಿ ಸದಸ್ಯರು ದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನವೀನ್ ಆಚಾರ್ಯ ಉಪನ್ಯಾಸ ನೀಡಿದರು.
ಆರಾಧನೆ ಅಂಗವಾಗಿ ನಡೆದ ಗಾಯನ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಸಮನ, ಸುಕೃತ, ರಮ್ಯ ದೇಸಾಯಿ ಕ್ರಮವಾಗಿ ಮೊದಲ ಮೂರು ಬಹುಮಾನ ಗಳಿಸಿದರೆ, ಹಿರಿಯರ ವಿಭಾಗದಲ್ಲಿ ಬಿ.ಕೆ. ಸುಶ್ರಾವ್ಯಾ, ಪ್ರತೀತಾ, ಎಂ. ವೈಷ್ಣವಿ ಕುಲಕರ್ಣಿ ಬಹುಮಾನ ಪಡೆದರು. ಸಮಿತಿಯ ಭೀಮರಾವ್ ಕುಲಕರ್ಣಿ, ಶೇಷಗಿರಿ, ಶ್ರೀನಿವಾಸ್, ಅನಂತ ಆಚಾರ್ಯ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.