ಬೆಂಗಳೂರು: ದೇಸಿ ಧರ್ಮದರ್ಶಿ ಸಂಸ್ಥೆ ನೀಡುವ 2010-11ನೇ ಸಾಲಿನ `ದಾಸಿಮಯ್ಯ ರಾಷ್ಟ್ರೀಯ ಪ್ರಶಸ್ತಿ~ ರೋಣ ತಾಲ್ಲೂಕಿನ ಖಾದಿ ಕೆಲಸಗಾರರ ಸಹಕಾರಿ ಉತ್ಪಾದಕ ಸಂಘದ ಅಧ್ಯಕ್ಷ ರಂಗಪ್ಪ ವೈ. ಹೂಗಾರ, ಹರಿಹರ ಚರಕ ಮತ್ತು ಗ್ರಾಮೋದ್ಯೋಗ ಸಹಕಾರಿ ಸಂಘ ಹಾಗೂ ಖಾದಿ ನೇಕಾರ ಸಹಕಾರಿ ಉತ್ಪಾದಕ ಸಂಘಕ್ಕೆ ಲಭಿಸಿದೆ.
ಹೂಗಾರ ಅವರಿಗೆ ವೈಯಕ್ತಿಕ ವಿಭಾಗದಲ್ಲಿ, ಹರಿಹರ ಚರಕ ಮತ್ತು ಗ್ರಾಮೋದ್ಯೋಗ ಸಹಕಾರಿ ಸಂಘ ಹಾಗೂ ಖಾದಿ ನೇಕಾರ ಸಹಕಾರಿ ಉತ್ಪಾದಕ ಸಂಘಕ್ಕೆ ಸಾಂಸ್ಥಿಕ ವಿಭಾಗದಲ್ಲಿ ಈ ಪ್ರಶಸ್ತಿ ಲಭಿಸಿದೆ ಎಂದು ದೇಸಿ ಸಂಸ್ಥೆಯ ವ್ಯವಸ್ಥಾಪಕ ಧರ್ಮದರ್ಶಿ, ರಂಗಕರ್ಮಿ ಪ್ರಸನ್ನ ಅವರು ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ಪ್ರಶಸ್ತಿ 40 ಸಾವಿರ ರೂಪಾಯಿ ನಗದು ಮತ್ತು ಮಹಾತ್ಮ ಗಾಂಧೀಜಿಯವರ ಕಂಚಿನ ಪ್ರತಿಮೆಯನ್ನು ಒಳಗೊಂಡಿದೆ ಎಂದು ಪ್ರಸನ್ನ ಅವರು ಹೇಳಿದರು.