ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಹ ನೀಗಿಸುವ ಅರವಟ್ಟಿಗೆ

Last Updated 21 ಮೇ 2012, 5:55 IST
ಅಕ್ಷರ ಗಾತ್ರ

ಗದಗ: ನೆತ್ತಿ ಸುಡುವ ಬಿರು ಬಿಸಿಲು, ಗಂಟಲು ಒಣಗುತ್ತಿದೆ, ಮೊದಲೇ ಬರಗಾಲ, ನೀರು ಸಿಗುತ್ತಿಲ್ಲ, ಅಂಗಡಿಗಳಲ್ಲೂ ನೀರು ಕೊಡುವುದಿಲ್ಲ, ಮನೆಗಳಲ್ಲಿ ನೀರು ಕೇಳೋಣವೆಂದರೆ ಕೇಳಲೂ ಹಿಂಜರಿಕೆ..
ಇಂತಹವರ ಪಾಲಿಗೆ `ಅರವಟ್ಟಿಗೆ~ ಬಾಯಾರಿಕೆ ನೀಗಿಸುವ ಜೀವಜಲ.
 
ಜಿಲ್ಲೆಯಲ್ಲಿ ಈಗ ಎಲ್ಲೆಲೂ ನೀರಿಗೆ ಹಾಹಾಕಾರ. ಹಳ್ಳಿಗಳು ನೀರಿನ ಅಭಾವದಿಂದ ನಲುಗುತ್ತಿವೆ. ಇಂತಹ ಸಂದರ್ಭದಲ್ಲಿ ಅರವಟ್ಟಿಗೆಗಳು ಬಾಯಾರಿಕೆ ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ತಂತ್ರಜ್ಞಾನ  ಮುಂದುವರೆದರೂ, ಬದಲಾವಣೆ ಯಾಗದ ಪದ್ಧತಿಗಳಲ್ಲಿ ಅರವಟ್ಟಿಗೆ ಸಹ ಒಂದು.

ದಾರಿಯಲ್ಲಿ ಬಾಯಾರಿದಾಗ ನೀರು ಕುಡಿಯಲೆಂದು ಮಡಿಕೆಯಲ್ಲಿ ನೀರು ಇಡುತ್ತಿದ್ದ ವ್ಯವಸ್ಥೆಗೆ `ನೀರಿನ ಅರವಟ್ಟಿಗೆ~ ಎನ್ನುತ್ತಾರೆ. ಬೇಸಿಗೆ ಆರಂಭವಾಗುವ ಏಪ್ರಿಲ್ ತಿಂಗಳಲ್ಲಿನಲ್ಲಿ ಅಂಗಡಿ, ಶಾಲೆ, ಮನೆ ಮುಂದೆ ಅರವಟ್ಟಿಗೆಗಳು ಕಾಣಿಸಿಕೊಳ್ಳುತ್ತವೆ. ಜನದಟ್ಟಣೆ ಇರುವ ಕಡೆ ಈಗಲೂ ಮಡಿಕೆಗಳಲ್ಲಿ ನೀರನ್ನು ಇಡುವ ಪದ್ಧತಿ ಜಾರಿಯಲ್ಲಿದೆ.

ಗದಗ-ಬೆಟಗೇರಿ ಅವಳಿ ನಗರದಲ್ಲೂ ವಿವಿಧ ಸಂಘಟನೆಗಳು ಭೂಮರಡ್ಡಿ ಸರ್ಕಲ್, ಹುಯಿಲುಗೋಳ ನಾರಾಯಣ ವೃತ್ತ, ತೋಂಟದಾರ್ಯ ಮಠದ ಬಳಿ, ಜಿಲ್ಲಾ ಕ್ರೀಡಾಂಗಣ ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಕೆ.ಎಚ್.ಪಾಟೀಲ ವೃತ್ತ ಹಾಗೂ ಇತರೆಡೆ ಅರವಟ್ಟಿಗೆಗಳನ್ನು ಇಟ್ಟಿದ್ದಾರೆ.

ಪರಿಚಿತರು, ಅಪರಿಚಿತರು, ಮಕ್ಕಳು, ವೃದ್ಧರು, ಮಹಿಳೆಯರು ದೂರದ ಹಳ್ಳಿಗಳ್ಳಿಂದ ಆಗಮಿಸುವವರು ಅರವಟ್ಟಿಗೆಗಳಲ್ಲಿ ನೀರು ಕುಡಿದು ದಣಿವಾರಿಸಿಕೊಳ್ಳುತ್ತಾರೆ.ಇಲ್ಲಿ ನೀರು ಕುಡಿಯಲು ಹಣ ನೀಡುವಂತಿಲ್ಲ. ಬೇಸಿಗೆ ಸಂರ್ದಭದಲ್ಲಿ ಮಾತ್ರ ಅರವಟ್ಟಿಗೆಗಳನ್ನು ಇಡಲಾಗುತ್ತದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಅರವಟ್ಟಿಗೆ ನಿಲ್ಲಿಸಲಾಗುತ್ತದೆ.

ಆನೇಕಲ್ ಬಳಿ ಅರವಟ್ಟಿಗೆಪುರ ಎಂಬ ಗ್ರಾಮ ಇದೆ. ಇಲ್ಲಿ ಅರವಟ್ಟಿಗೆಗಳನ್ನು ಹೆಚ್ಚು ಇಡುತ್ತಿದ್ದ ಕಾರಣ ಈ ಹೆಸರು ಬಂದಿರಬಹುದು ಎನ್ನುತ್ತಾರೆ ಹಿರಿಯರು.`ಏಪ್ರಿಲ್, ಮೇ ತಿಂಗಳಲ್ಲಿ ಶಾಲೆ ಮುಂದೆ ಅರವಟ್ಟಿಗೆ ಇಡ್ತಿವಿ. ಐದು ವರ್ಷದಿಂದ ಇಟ್ಟುಕೊಂಡು ಬಂದಿದ್ದೀವಿ. ನೀರು ಕುಡಿಯಲು ಸಾಕಷ್ಟು ಜನ ಬರ‌್ತಾರೆ. ಹಳ್ಳಿಗಳಿಂದ ಪಟ್ಟಣಕ್ಕೆ ಬರುವ ಜನರು ಇಲ್ಲಿ ತಣ್ಣನೆ ನೀರು ಕುಡಿದು ಹೋಗ್ತಾರೆ. 

ತುಂಗಾಭದ್ರ ನದಿ ನೀರನ್ನೆ ಜನರಿಗೆ ಕುಡಿಯಾಕ್ ಕೊಡೊದು. ಇದೇ ನೀರನ್ನೆ ನಾವ್ ಕುಡಿಯೋದು. ಜನರಿಗೆ ಒಳೆಯದಾದ್ರೆ ಸಾಕು~ ಎನ್ನುತ್ತಾರೆ ಅರವಟ್ಟಿಗೆ ಇಟ್ಟಿರುವ ಅಜ್ಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT