ರಾಯಚೂರು: ಸರ್ಕಾರಿ ವಸತಿ ನಿಲಯಗಳ ದಿನಗೂಲಿ ನೌಕರರನ್ನು ಕಾಯಂಗೊಳಿಸಬೇಕು ಹಾಗೂ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ದಿನಗೂಲಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಬುಧವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಈ ವಸತಿ ನಿಲಯಗಳಲ್ಲಿ ಅಡುಗೆ ಸಹಾಯಕರು, ಕಾವಲುಗಾರರು ಕಳೆದ 20 ವರ್ಷಗಳಿಂದ ದಿನಗೂಲಿ, ಹಾಜರಾತಿ ರಹಿತ ತುಂಡು ಕೆಲಸ, ಅನಧಿಕೃತ ರಸೀದಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ದಿನಗೂಲಿ ನೌಕರರಿಗೆ ಯಾವುದೇ ಭದ್ರತೆ, ಸೌಕರ್ಯಗಳ ಕಲ್ಪಿಸಿಲ್ಲ. ಇದರಿಂದ ದಿನಗೂಲಿ ನೌಕರರ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಸಮಸ್ಯೆ ವಿವರಿಸಿದರು.
ಸರ್ಕಾರ ಗುತ್ತಿಗೆದಾರರಿಗೆ ನೀಡುವ ಹಣದಲ್ಲಿ ದಿನಗೂಲಿ ನೌಕರರಿಗೆ ವೇತನ ಹಾಗೂ ಇತರ ಭತ್ಯೆಗಳನ್ನು ನೀಡಬಹುದಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ವಸತಿ ನಿಲಯಗಳ ದಿನಗೂಲಿ ನೌಕರರಿಗೆ ಮಾಸಿಕ ಭದ್ರತೆ ಕಲ್ಪಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.
2013–14 ಮತ್ತು 2014–15ನೇ ಸಾಲಿನ ಅವಧಿಗೆ ನೀಡಿರುವ ಹೊರಗುತ್ತಿಗೆ ಪದ್ಧತಿಯನ್ನು ಕೂಡಲೇ ರದ್ದುಪಡಿಸಬೇಕು, 20 ವರ್ಷಗಳಿಂದ ಕಾರ್ಯನಿರ್ವಹಿಸಿದ ಅಡುಗೆಯಾಳು, ಅಡುಗೆ ಸಹಾಯಕ, ಕಾವಲುಗಾರರ ದಿನಗೂಲಿ ನೌಕರರನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಕನಿಷ್ಠ ವೇತನ ಜಾರಿಗೊಳಿಸಬೇಕು, ನೌಕರರ ಹಾಜರಾತಿಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ವಸತಿ ನಿಲಯಗಳ ದಿನಗೂಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್ ಮಾರೆಪ್ಪ ವಕೀಲ ಜಿಪಂ ಸಿಇಒ ಅವರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ. ಸಂಘದ ಪದಾಧಿಕಾರಿಗಳಾದ ಆರ್. ರಾಮಸ್ವಾಮಿ, ತಿಮ್ಮಪ್ಪ ಗುಂಜಳ್ಳಿ, ತಿಮ್ಮಪ್ಪ ಇದ್ದರು.