ನವದೆಹಲಿ(ಪಿಟಿಐ): ಬಿಎಸ್ಪಿ ನಾಯಕ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ದೀಪಕ್ ಭಾರದ್ವಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪುತ್ರ ನಿತೇಶ್ ಕುಮಾರ್ನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ತಂದೆಯ ಹತ್ಯೆಗೆ ಮಗ ನಿತೇಶ್ ಕುಮಾರ್ ಸುಫಾರಿ ನೀಡಿರಬಹುದೆಂದು ಶಂಕಿಸಲಾಗಿದೆ. ಕೊಲೆಗೆ 3 ರಿಂದ 6 ಕೋಟಿ ರೂಪಾಯಿ ಸುಫಾರಿ ನೀಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ದೀಪಕ್ ಭಾರದ್ವಾಜ್ ಕೊಲೆ ಪ್ರಕರಣದಲ್ಲಿ ನಿತೇಶ್ ಕುಮಾರ್ನ ವಕೀಲರೊಬ್ಬರು ಹಾಗೂ ಸ್ವಾಜೀಯೊಬ್ಬರ ಪಾತ್ರ ಇರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಗಾಗಲೇ ಘಟನೆ ಸಂಬಂಧ ನಾಲ್ಕು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಮಾರ್ಚ್ 26ರಂದು ದಕ್ಷಿಣ ದೆಹಲಿಯ ಫಾರ್ಮ್ ಹೌಸ್ನಲ್ಲಿ ದೀಪಕ್ ಭಾರದ್ವಾಜ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಂದಿದ್ದರು.