ಚಿತ್ರದುರ್ಗ: ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ಇದ್ದರೂ, ದೀಪಾವಳಿ ಮುನ್ನಾ ದಿನವಾದ ಬುಧವಾರ ನಗರದಲ್ಲಿ ಸಾರ್ವಜನಿಕರು ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಉತ್ಸಾಹದಿಂದ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಇಲ್ಲಿನ ಮಹಾತ್ಮಗಾಂಧಿ ವೃತ್ತ, ತರಕಾರಿ ಹೂವು ಮಾರುಕಟ್ಟೆ, ಆನೆಬಾಗಿಲು ರಸ್ತೆ, ಲಕ್ಷ್ಮೀಬಜಾರ್, ವಾಸವಿ ಮಹಲ್ ಇತರೆ ರಸ್ತೆಗಳಲ್ಲಿ ಜನಜಂಗುಳಿಯಿತ್ತು. ಸೇವಂತಿಕೆ ದರ ಕಡಿಮೆ ಇದ್ದು ರೂ 10ಕ್ಕೆ ಎರಡು ಅಥವಾ ಮೂರು ಮಾರು ಮಾರಾಟ ಮಾಡುತ್ತಿದ್ದರು.
ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ವ್ಯವಸ್ಥೆ ಮಾಡಿರುವ ಪಟಾಕಿ ಅಂಗಡಿಗಳಿಗೆ ಚಿಣ್ಣರು, ಮಕ್ಕಳು, ಯುವಕ, ಯುವತಿಯರು ಪೋಷಕರನ್ನು ಕರೆದುಕೊಂಡು ವಿವಿಧ ಬಗೆಯ ಪಟಾಕಿಗಳನ್ನು ಕೊಂಡರು. ರೇಡಿಮೇಡ್, ಸೌಂದರ್ಯ ವರ್ಧಕ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು.
ದೀಪಾವಳಿ ಅಮವಾಸ್ಯೆ ದಿನ ಮಾರ್ವಡಿ ಹಾಗೂ ಇತರೆ ಸಮುದಾಯದವರು ಅಂಗಡಿಗಳನ್ನು ವಿಶೇಷವಾಗಿ ಅಲಂಕರಿಸಿ ಸಂಜೆ ಲಕ್ಷ್ಮೀಪೂಜೆ ಮಾಡಿದರು.
ದೀಪಾವಳಿ ಅಮಾವಾಸ್ಯೆಯಿಂದ ಮುಂದಿನ ಮಾರ್ಗಶಿರ ಅಮಾವಾಸ್ಯೆ ಒಳಗೆ ಯಾವ ದಿನವಾದರೂ ಅನುಕೂಲಕ್ಕೆ ತಕ್ಕಂತೆ ಹಬ್ಬ ಆಚರಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅಮಾವಾಸ್ಯೆ ಕೊನೆಯ ಮೂರ್ನಾಲ್ಕು ದಿನಗಳ ಹಿಂದೆ ಕಿರು ದೀಪಾವಳಿ ಆಚರಿಸುವ ಪದ್ಧತಿಯಿದೆ. ಕೆಲವರು ಹಬ್ಬದ ಜತೆಗೆ ಹಿರಿಯರ ಪೂಜೆ ನೆರವೇರಿಸುತ್ತಾರೆ.