ಶಿವಮೊಗ್ಗ: ಪಕ್ಷದಿಂದ ದೂರ ಹೋಗುತ್ತಿರುವುದಕ್ಕೆ ಯಾವುದೇ ದುಃಖ, ಪಶ್ಚಾತ್ತಾಪ ಇಲ್ಲ. ಈಗಾಗಲೇ ಬಿಜೆಪಿಯಿಂದ ಮಾನಸಿಕವಾಗಿ ದೂರ ಇದ್ದೆ; ಇನ್ನು ಮುಂದೆ ಸ್ವತಂತ್ರವಾಗಿ ಕೆಲಸ ಮಾಡಲು ಅನುಕೂಲವಾಗಿದೆ ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಪ್ರತಿಕ್ರಿಯೆ ನೀಡಿದರು.
ಬಿಜೆಪಿಯಿಂದ ಅಮಾನತು ಗೊಂಡ ಹಿನ್ನೆಲೆಯಲ್ಲಿ ಸೋಮವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗರ್ಭಗುಡಿ ಸಂಸ್ಕೃತಿಯಿಂದ ಹೊರಬಂದಿದ್ದೇನೆ. ಈಗ ಮುಕ್ತನಾಗಿ, ನಿರಾಳನಾಗಿದ್ದೇನೆ. ಈಶ್ವರಪ್ಪ ಅವರಂತಹ ದೊಡ್ಡವರ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದ ಅವರು, ಮುಂದಿನ ನಡೆ ಬಗ್ಗೆ ಹಿರಿಯರ ಜತೆ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗುವುದು ಎಂದರು.