ಸುರತ್ಕಲ್: ಎಂಆರ್ಪಿಎಲ್ ಸಂಪರ್ಕ ಕಲ್ಪಿಸುವ ಕಾನ ರಸ್ತೆಯಿಂದ ಕೋಡಿಕೆರೆ ಎಂಎಸ್ಇಝೆಡ್ ನಿರ್ವಸಿತರ ಕಾಲೊನಿಯ ಸಂಪರ್ಕ ರಸ್ತೆ ತೀರಾ ಹದಗೆಟ್ಟಿದೆ. ರಸ್ತೆಯ ಅರ್ಧಭಾಗವನ್ನು ಕಾಂಕ್ರೀಟಿಕರಣ ಮಾಡಿದ್ದರೂ ಕಾನ ರಸ್ತೆಗೆ ಕೂಡುವ ಪ್ರದೇಶ ಹಾಗೇ ಇದೆ. ಇದರಿಂದಾಗಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ.
ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೊಸ ರಸ್ತೆ ಕೂಡಾ ಈ ರಸ್ತೆಯ ಸಂಪರ್ಕದಿಂದ ಮುಂದುವರಿಯುತ್ತದೆ. ವಿಮಾನ ನಿಲ್ದಾಣ ರಸ್ತೆ ವಿಸ್ತರಣೆಗೊಳ್ಳುತ್ತಿದ್ದರೂ ಸಂಪರ್ಕಿಸುವ ಸ್ಥಳವನ್ನು ದುರಸ್ತಿಗೊಳಿಸುವ ಗೋಜಿಗೆ ಸಂಬಂಧಿಸಿದವರು ಮನಸ್ಸು ಮಾಡುತ್ತಿಲ್ಲ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿಬಂದಿದೆ.
ಈ ರಸ್ತೆಯಲ್ಲಿ ಭಾರೀ ಗಾತ್ರದ ವಾಹನಗಳು, ಬಸ್ಗಳು, ನಿತ್ಯ ಸಂಚರಿಸುತ್ತಿದ್ದು ದ್ವಿಚಕ್ರ ವಾಹನ ಸವಾರರು ರಸ್ತೆ ಗುಂಡಿ ತಪ್ಪಿಸುವುದಕ್ಕೆ ಹರಸಾಹಸಪಡಬೇಕಾಗಿದೆ.
ಈ ರಸ್ತೆ ಮೂಲಕ ಶಾಲಾ ಮಕ್ಕಳು ಸಂಚರಿಸುತ್ತಿರುತ್ತಾರೆ. ರಸ್ತೆ ಮೂಲಕ ಹಾದುಹೋಗುವ ಚರಂಡಿ ಮೇಲೆ ಹಾಕಿರುವ ಕಲ್ಲುಗಳು ಚಪ್ಪಡಿಗಳು ಕಿತ್ತು ಹೊಂಡಗಳಾಗಿವೆ. ರಸ್ತೆಯನ್ನು ಶೀಘ್ರ ದುರಸ್ತಿ ಮಾಡಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.