ಚಿತ್ರದುರ್ಗ: ಐತಿಹಾಸಿಕ ಚಿತ್ರದುರ್ಗದ ಸಂಶೋಧನೆಗಳು ಇನ್ನೂ ಸಾಕಷ್ಟು ನಡೆಯಬೇಕಾಗಿದೆ ಎಂದು ಇತಿಹಾಸ ಸಂಶೋಧಕ ಪ್ರೊ.ಲಕ್ಷ್ಮಣ್ ತೆಲಗಾವಿ ಭಾನುವಾರ ಇಲ್ಲಿ ಅಭಿಪ್ರಾಯಪಟ್ಟರು.
ಹರ್ತಿಕೋಟೆಯ ವಾಲ್ಮೀಕಿ ಸಾಹಿತ್ಯ ಸಂಪದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸಿಂಗಪುರ ಅಪೂರ್ವ ಪ್ರಕಾಶನ, ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಚಾರಿಟೇಬಲ್ ಟ್ರಸ್ಟ್, ಡಾ.ಡಿ.ರಾಮಚಂದ್ರನಾಯ್ಕ ಗೆಳೆಯರ ಬಳಗ, ಚಿತ್ರದುರ್ಗ ಸಂಶೋಧನಾ ತಂಡದ ಸಂಯುಕ್ತಾಶ್ರಯದಲ್ಲಿ ತಮ್ಮ 65ನೇ ಹುಟ್ಟುಹಬ್ಬ ಪ್ರಯುಕ್ತ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಚಿತ್ರದುರ್ಗದ ಸಂಶೋಧನೆ ಬಗ್ಗೆ ಸಾಕಷ್ಟು ಅಧ್ಯಯನ ಇನ್ನೂ ಬಾಕಿಯಿದೆ. ಯುವ ಸಂಶೋಧಕರು ಇದನ್ನು ಮುಂದುವರಿಸಬೇಕೆಂದು ಹೇಳಿದರು.
ಬದುಕಿನುದ್ದಕ್ಕೂ ಚಿತ್ರದುರ್ಗ ಇತಿಹಾಸ ಸಂಶೋಧನೆಗೆ ಮುಡುಪಾಗಿಟ್ಟಿದ್ದೇನೆ. ಸಾಧನೆಯೊಂದಿಗೆ ಹೆಜ್ಜೆ ಹಾಕುತ್ತಿದ್ದು ಎಲ್ಲಿಂದ ಪಡೆದಿರುವೆನೋ ಅಲ್ಲಿಯೇ ನೀಡಬೇಕು ಎನ್ನುವ ಸೂತ್ರ ಅಳವಡಿಸಿಕೊಂಡಿದ್ದೇನೆ ಎಂದರು.
`ಸಮಾಜದಲ್ಲಿ ಪ್ರೀತಿ ಒಂದೇ ಒಗ್ಗೂಡಿಸುತ್ತದೆ. ಎಲ್ಲವನ್ನೂ ಗೆಲ್ಲುತ್ತದೆ. ಆದ್ದರಿಂದಲೇ ಟೀಕಾಕಾರರ ಮುಂದೆ ಮೆದುವಾಗಿ ನನ್ನ ನಡವಳಿಕೆ ಬಗ್ಗೆ ಎಚ್ಚರ ವಹಿಸುತ್ತೇನೆ. ನನ್ನ 65 ವರ್ಷಗಳ ಜೀವಿತಾವಧಿಯ ವಿಮರ್ಶೆ ಮಾಡಿಕೊಳ್ಳಲು ಸುಸಂದರ್ಭ~ ಎಂದರು.
ಸಾಹಿತಿ ಎಸ್.ಆರ್.ಗುರುನಾಥ್ ರಚಿಸಿರುವ, ವಾಲ್ಮೀಕಿ ಸಾಹಿತ್ಯ ಸಂಪದ ಪ್ರಕಟಿಸಿದ `ದುರ್ಗಾಭಿಜಾತ~, `ತೆಲಗಾವಿಷನ್~ಕೃತಿ ಬಿಡುಗಡೆ ಮಾಡಲಾಯಿತು.