ನವದೆಹಲಿ (ಪಿಟಿಐ): ಯಮುನಾ ನದಿ ತೀರದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಮರಳು ಮಾಫಿಯಾ ಚಟುವಟಕೆ ಹತ್ತಿಕ್ಕಲು ದಿಟ್ಟ ಕ್ರಮ ಕೈಗೊಂಡ ಐಎಎಸ್ ಅಧಿಕಾರಿಯ ಅಮಾನತು ಬಗ್ಗೆ ವರದಿ ನೀಡುವಂತೆ ಸಮಾಜವಾದಿ ಪಕ್ಷ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ಕೇಂದ್ರ ಸರ್ಕಾರವು ಪತ್ರ ಬರೆದಿದೆ.
2010ರ ತಂಡದ ಐಎಎಸ್ ಅಧಿಕಾರಿ ದುರ್ಗಾಶಕ್ತಿ ನಾಗಪಾಲ್ ಅವರನ್ನು ಅನುಚಿತವಾಗಿ ನಡೆಸಿಕೊಳ್ಳಬಾರದು ಎಂಬುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಶನಿವಾರ ಪತ್ರ ಬರೆದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ಐಎಎಸ್ ಚೌಕಟ್ಟಿನ ಆಡಳಿತಾತ್ಮಕ ಮಧ್ಯವರ್ತಿ ಇಲಾಖೆಯು ಸಿಬ್ಬಂದಿ ಸಚಿವಾಲಯದ ಹೊಣೆ ವಹಿಸಿರುವ ಪ್ರಧಾನಿ ಅವರ ವ್ಯಾಪ್ತಿಗೆ ಬರುತ್ತದೆ.
ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ವಿಚಾರದಲ್ಲಿ ತತ್ ಕ್ಷಣ ಕ್ರಮ ಕೈಗೊಂಡಿದ್ದು 28ರ ಹರೆಯದ ನಾಗಪಾಲ್ ಅವರ ಅಮಾನತು ಬಗ್ಗೆ ವರದಿ ಕಳುಹಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
'ಅಧಿಕಾರಿಯನ್ನು ಅನುಚಿತವಾಗಿ ನಡೆಸಿಕೊಳ್ಳದಂತೆ ನಾವು ಖಾತರಿ ನೀಡಬೇಕಾಗಿದೆ' ಎಂದು ಸೋನಿಯಾ ಗಾಂಧಿ ಅವರು ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.