ಲಖನೌ (ಪಿಟಿಐ): ಐಎಎಸ್ ಅಧಿಕಾರಿ ದುರ್ಗಾಶಕ್ತಿ ನಾಗಪಾಲ್ ಅವರ ಅಮಾನತು ಆದೇಶ ಹಿಂಪಡೆದ ಎರಡು ದಿನಗಳ ಬೆನ್ನಲ್ಲೇ ಅವರ ವಿರುದ್ಧದ ಇಲಾಖಾ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರ ಕೈಬಿಟ್ಟಿದೆ.
‘ದುರ್ಗಾಶಕ್ತಿ ಅವರ ಅಮಾನತು ಆದೇಶ ಹಿಂಪಡೆಯಲಾಗಿದೆ. ಹೀಗಾಗಿ ಇಲಾಖಾ ತನಿಖೆ ಮುಂದುವರೆಸು ವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೌತಮ್ ಬುದ್ಧ ನಗರದ ಉಪ ವಿಭಾಗಾಧಿಕಾರಿಯಾಗಿದ್ದ ದುರ್ಗಾಶಕ್ತಿ ವಿರುದ್ಧದ ಪ್ರಕರಣದ ತನಿಖೆಯನ್ನು ರಾಜ್ಯದ ಪ್ರಧಾನ ಕಾರ್ಯದರ್ಶಿ ಆರ್.ಎಂ. ಶ್ರೀವಾಸ್ತವ್ ಕೈಗೊಂಡಿದ್ದರು.
ಸೆಪ್ಟೆಂಬರ್ 22ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿ ಮಸೀದಿ ಗೋಡೆ ನೆಲಸಮಕ್ಕೆ ಆದೇಶ ನೀಡಿದ್ದರ ಕುರಿತು ವಿವರಣೆ ನೀಡಿದ್ದ ಬಳಿಕ ಅವರ ಅಮಾನತು ಆದೇಶ ಹಿಂಪಡೆಯ ಲಾಗಿತ್ತು. ದುರ್ಗಾ ಅವರನ್ನು ಜುಲೈ 27ರಂದು ಅಮಾನತು ಮಾಡಲಾಗಿತ್ತು.
ದುರ್ಗಾಶಕ್ತಿಗೆ ಅಪಮಾನ, ಬಿಜೆಪಿ ಆರೋಪ
ದುರ್ಗಾಶಕ್ತಿ ಅಮಾನತು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ಹರಿಹಾಯ್ದಿರುವ ರಾಜ್ಯ ಬಿಜೆಪಿ ಘಟಕ, ವಿನಾಕಾರಣ ಉನ್ನತ ಅಧಿಕಾರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದೆ.