ಭದ್ರಾವತಿ: ಪರಿಸರ ಸ್ನೇಹಿ ಮಣ್ಣಿನ ಗಣಪನ ಪ್ರತಿಷ್ಠಾಪನೆಗೆ ಒಲವು ತೋರುವುದು ಒಳಿತು' ಎಂದು ತಹಶೀಲ್ದಾರ್ ಸಿದ್ದಮಲ್ಲಪ್ಪ ಮನವಿ ಮಾಡಿದರು.
ಇಲ್ಲಿನ ಪೊಲೀಸ್ ಉಪ ವಿಭಾಗ ಮಂಗಳವಾರ ವೀರಶೈವ ಸಭಾ ಭವನದಲ್ಲಿ ಏರ್ಪಡಿಸಿದ್ದ ಶಾಂತಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನದಿ, ಜಲ ಸಂರಕ್ಷಣೆ ಮಾಡುವುದು ಪ್ರತಿ ವ್ಯಕ್ತಿಯ ಕರ್ತವ್ಯ. ಹಾಗಾಗಿ ಪರಿಸರ ಸ್ನೇಹಿ ಗಣಪತಿಗೆ ಆದ್ಯತೆ ನೀಡುವಂತೆ ಅವರು ಮನವಿ ಮಾಡಿದರು.
ಸಿಬ್ಬಂದಿ ಕೊರತೆ: ಜಿಲ್ಲೆಯಲ್ಲಿ ಅಂದಾಜು ಎರಡು ಸಾವಿರ ಗಣಪತಿ ಕೂರಿಸುವ ಸಾಧ್ಯತೆ ಇದೆ. ಪೊಲೀಸ್ ಬಲ ಸಹ ಅಷ್ಟೇ ಇದೆ. ಇದರಿಂದ ಭದ್ರತೆ ನೀಡಲು ಸಾಧ್ಯವಿಲ್ಲ. ಹಾಗಾಗಿ ಹೊರ ಊರುಗಳಿಂದ ಸಿಬ್ಬಂದಿ ಕರೆಸುವ ಅಗತ್ಯವಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್ ಹೇಳಿದರು.
ಮೌನ ವ್ಯಕ್ತಿಗಳಿಂದ ಕೃತ್ಯ: ಸಭೆಯಲ್ಲಿ ಮಾತನಾಡಿದ ನೀವೆಲ್ಲಾ ಶಾಂತಿ, ಸುವ್ಯವಸ್ಥೆ ಕಾಪಾಡುವ ಭರವಸೆ ನೀಡಿದ್ದೀರಾ ಆದರೆ, ಮೌನವಾಗಿರುವ ವ್ಯಕ್ತಿಗಳಿಂದ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇದೆ. ಇದರ ಕುರಿತು ಎಚ್ಚರ ವಹಿಸುವ ಅಗತ್ಯವಿದೆ ಎಸ್ಪಿ ತಿಳಿಸಿದರು.
ಈಗಾಗಲೇ ಪೊಲೀಸ್ ಸಿಬ್ಬಂದಿ ಗಣಪತಿ ಸಮಿತಿ ಬಳಿ ಬಂದು ಸಾಕಷ್ಟು ಮಾಹಿತಿ ಕಲೆ ಹಾಕುವ ಕೆಲಸ ಮಾಡಿದ್ದಾರೆ ಎಂದು ವಿವರಿಸಿದರು. ಸಭೆಯಲ್ಲಿ ನಗರಸಭೆ ಆಯುಕ್ತ ಬಿ.ಡಿ. ಬಸವರಾಜ್, ಮೆಸ್ಕಾಂ ಅಧಿಕಾರಿಗಳಾದ ಹಾಲೇಶಪ್ಪ, ಮಂಜುನಾಥ್ ಉಪಸ್ಥಿತರಿದ್ದರು.
ನಾಗರಿಕ ಸಮಿತಿ ಜವರಯ್ಯ, ಮಾಜಿ ಕೌನ್ಸಿಲರ್ ದಿಲ್ದಾರ್, ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಸನಾವುಲ್ಲಾ, ಚಂದ್ರಶೇಖರ್, ಬಿ.ಟಿ. ನಾಗರಾಜ್, ಬಿಜೆಪಿ ಮುಖಂಡರಾದ ಶಿವಾಜಿರಾವ್ ಸಿಂಧ್ಯಾ, ಎಂ. ಮಂಜುನಾಥ್, ಜೆಡಿಎಸ್ ಅಧ್ಯಕ್ಷ ಆರ್. ಕರುಣಾಮೂರ್ತಿ, ವಿಎಚ್ಪಿ ಹಾ. ರಾಮಪ್ಪ, ಹಿಂದೂ ಮಹಾಸಭಾ ಅಧ್ಯಕ್ಷ ವಿ. ಕದಿರೇಶ್, ಜಮಾತೆ ಇಸ್ಲಾಮಿ ಹಿಂದ್ ಮುನೀರ್ ಅಹಮದ್, ಬೋವಿ ಕಾಲೋನಿ ಗಣಪತಿ ಅಧ್ಯಕ್ಷ ಯಲ್ಲಪ್ಪ, ಉಮೇಶ್ ಮಾತನಾಡಿದರು.