ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಷ್ಟ ರಾಜಕಾರಣ

Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಉತ್ತರಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ಸಂಭವಿಸಿದ ಹಿಂಸಾಚಾರ, ಕೋಮುವಾದಿ ರಾಜಕಾರಣದ  ಇನ್ನೊಂದು ವಿಕೃತ ರೂಪ. ಕ್ಷುಲ್ಲಕ ಸಂಗತಿಗಳು ಕೋಮು ಗಲಭೆಯ ಸ್ವರೂಪ ಪಡೆದುಕೊಂಡು ಅಮಾಯಕರನ್ನು ಬಲಿ ತೆಗೆದುಕೊಂಡ ಘಟನೆಗಳು ಉತ್ತರಪ್ರದೇಶಕ್ಕೆ ಹೊಸದಲ್ಲ. ಮುಜಾಫರ್‌ನಗರ ಜಿಲ್ಲೆಯ ಗಲಭೆಗಳಲ್ಲಿ ನಲವತ್ತಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಗಲಭೆಯನ್ನು ಹತ್ತಿಕ್ಕಲು ಕ್ಷಿಪ್ರ ಕಾರ್ಯಚರಣೆ ಹಾಗೂ ಅರೆಸೇನಾ ಪಡೆಗಳ ನೆರವು ಪಡೆಯುವಂತಹ ಪರಿಸ್ಥಿತಿ ಆ ರಾಜ್ಯದಲ್ಲಿ ನಿರ್ಮಾಣವಾಗಿದೆ. ಈ ಬೆಳವಣಿಗೆ ನಿಜಕ್ಕೂ ದುರದೃಷ್ಟಕರ. ಕೀಟಲೆ ಮಾಡಿದ ಘಟನೆಯೊಂದು ಕೋಮು ಗಲಭೆ ಸ್ವರೂಪ ಪಡೆಯಲು ಸ್ಥಳೀಯ ಆಡಳಿತ ಮತ್ತು ಪೊಲೀಸರು ಅವಕಾಶ ಕೊಡಬಾರದಿತ್ತು.

ಇಂಟರ್‌ನೆಟ್ ಹಾಗೂ ಮೊಬೈಲ್ ಫೋನ್‌ಗಳಲ್ಲಿ ಹರಿದಾಡಿದ ತಪ್ಪು ಸಂದೇಶಗಳು ದೊಡ್ಡ ಮಟ್ಟದ ಹಿಂಸಾಚಾರಕ್ಕೆ ಕಾರಣವಾಗಿವೆ. ಗಲಭೆ ನಡೆಯುತ್ತಿದ್ದ ಸಂದರ್ಭದಲ್ಲಿ ‘ಮಹಾ ಪಂಚಾಯತ್‌’ ಮುಖಂಡರು, ಬಿಜೆಪಿ ಹಾಗೂ ಕಾಂಗ್ರೆಸ್ಸಿಗೆ ಸೇರಿದ  ಶಾಸಕರು ಜನರನ್ನು ಉದ್ರೇಕಿಸುವಂತಹ ಭಾಷಣ ಮಾಡಿ ಉರಿಯುವ ಬೆಂಕಿಗೆ ತುಪ್ಪ ಸುರಿದಿದಾ್ದರೆ. ಅವರ ವರ್ತನೆ ಖಂಡನೀಯ. ಸರ್ಕಾರ, ಮಹಾ ಪಂಚಾಯತ್‌ಗೆ ಅವಕಾಶ ಕೊಡಬಾರದಿತ್ತು.

ಸಣ್ಣ ಪುಟ್ಟ ಜಗಳಗಳನ್ನು ಅಲ್ಲಲ್ಲೇ ಶಮನಗೊಳಿಸಲು ಪೊಲೀಸರು ಮತ್ತು ಸ್ಥಳೀಯ ಆಡಳಿತ ಆಸಕ್ತಿಯನ್ನೇ ತೋರಿಸದ ಪರಿಣಾಮವಿದು. ಸರ್ಕಾರ ಸೇನೆಯನ್ನು ಬಳಸಿಕೊಂಡು ಗಲಭೆಯನ್ನು ಹತ್ತಿಕ್ಕಬಹುದು. ಆದರೆ ಕೋಮು ಗಲಭೆಗಳನ್ನು ಸೃಷ್ಟಿಸಿ ನಿರಂತರವಾಗಿ ರಾಜಕೀಯ ಲಾಭ ಪಡೆಯುವ ಶಕ್ತಿಗಳನ್ನು ಗುರುತಿಸಿ ಶಿಕ್ಷಿಸುವವರೆಗೆ  ಉತ್ತರ ಪ್ರದೇಶಕ್ಕೆ ನೆಮ್ಮದಿ ಇಲ್ಲ.

ಅಖಿಲೇಶ್ ಯಾದವ್‌ರ ಸರ್ಕಾರ ಆರಂಭದಿಂದಲೂ ಪಕ್ಷಪಾತದ ಧೋರಣೆ ಅನುಸರಿಸಿಕೊಂಡೇ ಬರುತ್ತಿದೆ ಎಂಬ ಭಾವನೆ ಆ ರಾಜ್ಯದ ಬಹುಸಂಖ್ಯಾತರಲ್ಲಿ ಇದ್ದಂತಿದೆ. ಸಮಾಜವಾದಿ ಪಕ್ಷ, ಅಲ್ಪ ಸಂಖ್ಯಾತರನ್ನು ಓಲೈಸಿಕೊಂಡೇ ಅಧಿಕಾರಕ್ಕೆ ಬಂತು ಎಂಬುದು ಗುಟ್ಟೇನಲ್ಲ.

ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಅಲ್ಪಸಂಖ್ಯಾತರ ರಕ್ಷಣೆ ಹೆಸರಿನಲ್ಲಿ ರಾಜ್ಯ ಸರ್ಕಾರದ ಪ್ರಮುಖ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಅದರಿಂದಾಗಿ ಸರ್ಕಾರಿ ಯಂತ್ರ ಗೊಂದಲದಲ್ಲಿದೆ. ಹಿರಿಯ ಅಧಿಕಾರಿಗಳು ಸಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಪಕ್ಷ ಹಾಗೂ ಸರ್ಕಾರದಲ್ಲಿ ಎರಡು ಅಧಿಕಾರ ಕೇಂದ್ರಗಳಿವೆ ಎಂಬ ಭಾವನೆ ಸರ್ಕಾರದ ಉನ್ನತ ಮಟ್ಟದಲ್ಲಿದೆ.

ಅದರಿಂದಾಗಿ ಸರ್ಕಾರ ದಿಟ್ಟ ನಿರ್ಧಾರಗಳನ್ನು ತೆಗೆದು ಕೊಳ್ಳುವಲ್ಲಿ ವಿಫಲವಾಗಿದೆ. ಅದರ ಪರಿಣಾಮವೇ ಮುಜಾಫರ್ ನಗರ ಜಿಲ್ಲೆಯ ಕೋಮು ಗಲಭೆ ಎಂದು ಅರ್ಥೈಸಲಾಗುತ್ತಿದೆ.   ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಅಮಾಯಕರ ಜೀವದ ಜತೆ ಚೆಲಾ್ಲಟ ಆಡುವುದು ತರವಲ್ಲ.   ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯ ತಯಾರಿ ಭಾಗವಾಗಿ  ಉತ್ತರಪ್ರದೇಶದ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ.

ರಾಜಕಾರಣಿಗಳ ಹುನಾ್ನರಗಳಿಗೆ   ಜನರು ಮರುಳಾಗ ಬಾರದು. ಅವರ ಕೈಯಲ್ಲಿ ದಾಳ ಆಗಬಾರದು. ಜನರಲ್ಲಿ ಸುರಕ್ಷಾ ಭಾವ ಮೂಡಿಸುವ ಕೆಲಸ ತುರ್ತಾಗಿ ಆಗಬೇಕು. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವ ದಿಟ್ಟತನವನ್ನು ಅಖಿಲೇಶ್ ಸರ್ಕಾರ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT