ಶರವೇಗದಲ್ಲಿ ಬೆಳೆಯುತ್ತಿರುವ ರಾಜ್ಯದ ಪ್ರಮುಖ ನಗರಗಳಲ್ಲಿ ಗುಲ್ಬರ್ಗವೂ ಒಂದು. ಆದರೆ ಇಲ್ಲಿಯ ಮೂಲಸೌಕರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಸಿಗದಿರುವ ಪರಿಣಾಮ ದಿನಬೆಳಗಾದರೆ ಸಾರ್ವಜನಿಕರು ಪಾಲಿಕೆ ಹಾಗೂ ಜನಪ್ರತಿನಿಧಿಗಳನ್ನು ಶಪಿಸುವಂತಾಗಿದೆ.
ರಸ್ತೆ ವಿಸ್ತರಣೆ ನೆಪದಲ್ಲಿ ನಗರದ ಪ್ರಮುಖ ರಸ್ತೆಗಳನ್ನು ಇತ್ತಿತ್ತಲಾಗಿ ಎಲ್ಲೆಂದರಲ್ಲಿ ಗುಂಡಿ ತೋಡಲಾಗಿದ್ದು ಎಲ್ಲ ಕಾಮಗಾರಿಗಳು ಅಪೂರ್ಣವಾಗಿವೆ. ಅಪ್ಪನ ಗುಡಿ, ಎಂಎಸ್ಕೆ ಮಿಲ್, ಎಸ್ಟಿಬಿಟಿ ಮತ್ತಿತರ ಮುಖ್ಯ ರಸ್ತೆಗಳಲ್ಲಿ ಸಂಚರಿಸಲು ಹರಸಾಹಸ ಮಾಡಬೇಕಾಗುತ್ತದೆ.
ಇಲ್ಲೆಲ್ಲ ಕಾಣುವುದು ಬರಿ ದೂಳು, ಇಕ್ಕಟ್ಟಾದ ರಸ್ತೆಗಳಲ್ಲಿ ಪಾದಚಾರಿಗಳ ರಸ್ತೆಯಂತೂ ಕಾಣುವುದೇ ಇಲ್ಲ. ಹೀಗಾಗಿ ನಿತ್ಯವೂ ಅಪಘಾತಗಳು ಸಾಮಾನ್ಯ ಎನ್ನುವಂತಾಗಿದೆ.
ಮುಖ್ಯ ರಸ್ತೆಗಳಲ್ಲೇ ದೂಳಿನ ಸ್ನಾನವಾದರೆ ಇನ್ನು ಒಳ ರಸ್ತೆಗಳ ಸ್ಥಿತಿ ಹೇಳತೀರದು. ನಗರದ ಈ ಅವಸ್ಥೆ ಕಂಡ ಹಳ್ಳಿ ಜನ `ಇಲ್ಲಿಗಿಂತ ನಮ್ಮೂರಿನ ರಸ್ತೆಗಳೇ ಚೆಂದ~ ಎನ್ನುವಂತಾಗಿದೆ.