ನವದೆಹಲಿ (ಪಿಟಿಐ/ಐಎಎನ್ಎಸ್): ದೆಹಲಿಯಲ್ಲಿ ಕಾಂಗ್ರೆಸ್ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚಿಸುವ ಸ್ಪಷ್ಟ ಸುಳಿವನ್ನು ನೀಡಿರುವ ಆಮ್ ಆದ್ಮಿ ಪಕ್ಷವು (ಎಎಪಿ), ಈ ಬಗ್ಗೆ ಸೋಮವಾರ (ಡಿ.23) ಬೆಳಿಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಈ ಮಧ್ಯೆ, ಸರ್ಕಾರ ರಚನೆಗೆ ಸಂಬಂಧಿಸಿದಂತೆ ಪಕ್ಷದ ಅಂತಿಮ ನಿರ್ಧಾರ ತಿಳಿಸಲು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಸೋಮವಾರ ಮಧ್ಯಾಹ್ನ 12.30ಕ್ಕೆ ಭೇಟಿ ಮಾಡುವುದಾಗಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಪಕ್ಷದ ಕೆಲವು ಮುಖಂಡರು ಮಾತ್ರ ಕಾಂಗ್ರೆಸ್ನೊಂದಿಗೆ ಮೈತ್ರಿ ಅಸಾಧ್ಯ ಎಂದೂ ಹೇಳಿದ್ದಾರೆ.
ಸರ್ಕಾರ ರಚನೆಗೆ ಶೇ 80 ಜನರ ಒಲವು: ‘ಸರ್ಕಾರ ರಚನೆಗೆ ಸಂಬಂಧಿಸಿದಂತೆ ಕಳೆದ ಒಂದು ವಾರದಿಂದ ನಡೆಯುತ್ತಿರುವ ಜನಾಭಿಪ್ರಾಯ ಸಂಗ್ರಹ ಕಾರ್ಯಕ್ಕೆ ಜನರು ಸಕಾರಾತ್ಮವಾಗಿಯೇ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಶೇ 80ರಷ್ಟು ಜನರು ಸರ್ಕಾರ ರಚಿಸಬೇಕು ಎಂದಿದ್ದಾರೆ. ಆದರೂ ಜನರ ಪ್ರತಿಕ್ರಿಯೆಯನ್ನು ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ವಿಶ್ಲೇಷಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ಎಂದು ಕೇಜ್ರಿವಾಲ್ ಹೇಳಿದ್ದಾರೆ.
‘ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನೆಲ್ಲ ಈಡೇರಿಸುವಿರಾ?’ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಜ್ರಿವಾಲ್, ‘ಪಕ್ಷದ ಪ್ರಣಾಳಿಕೆ ಬಲಿಷ್ಠವಾಗಿದೆ. ಇದಕ್ಕೆ ನಾವು ಬದ್ಧರಾಗಿದ್ದೇವೆ. ಅದನ್ನು ತಜ್ಞರ ಜೊತೆಗೆ ಚರ್ಚಿಸಿಯೇ ಸಿದ್ಧಪಡಿಸಿದ್ದೇವೆ. ಪ್ರಣಾಳಿಕೆಯ ಕೆಲವೊಂದು ಅಂಶಗಳನ್ನು ಸರ್ಕಾರ ರಚಿಸಿದ ಕೆಲವೇ ಗಂಟೆಗಳಲ್ಲಿ ಜಾರಿಗೆ ತರಬಹುದು’ ಎಂದಿದ್ದಾರೆ.
‘280 ಜನಸಂಪರ್ಕ ಸಭೆಗಳನ್ನು ಈ ವರೆಗೂ ನಡೆಸಲಾಗಿದೆ. ಬಹುತೇಕ ಸಭೆಗಳಲ್ಲಿ ಕಾಂಗ್ರೆಸ್ ನೆರವಿನಿಂದ ಸರ್ಕಾರ ರಚಿಸುವಂತೆ ಅಭಿಪ್ರಾಯ ವ್ಯಕ್ತವಾಗಿದೆ. ಜೊತೆಗೆ, ಎಸ್ಎಂಎಸ್, ಸಾಮಾಜಿಕ ತಾಣಗಳ ಮೂಲಕವೂ ವ್ಯಾಪಕ ಪ್ರತಿಕ್ರಿಯೆಗಳು ಬಂದಿದ್ದು, ಸರ್ಕಾರ ರಚಿಸುವಂತೆ ಜನರು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನು ಪರಾಮರ್ಶಿಸಲಾಗುವುದು’ ಎಂದು ತಿಳಿಸಿದ್ದಾರೆ.
‘ವೈಯಕ್ತಿಕವಾಗಿ ಕಾಂಗ್ರೆಸ್ ಜೊತೆಗೆ ಹೋಗಲು ಇಷ್ಟವಿಲ್ಲ. ನಾವು ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವೇ ಹೋರಾಡಿದ್ದು. ಆದರೆ, ಜನಾಭಿಪ್ರಾಯ ವಿಭಿನ್ನವಾಗಿದೆ’ ಎಂದಿದ್ದಾರೆ.
‘ಕಾಂಗ್ರೆಸ್ ಬೆಂಬಲ ಮುಂದುವರಿಸುವ ಇಲ್ಲವೆ ಹಿಂದೆ ಪಡೆಯುವ ಅಂಜಿಕೆಯೇನೂ ನನಗಿಲ್ಲ. ಅವರು (ಕಾಂಗ್ರೆಸ್) ಏನು ಬೇಕಾದರೂ ಮಾಡಲಿ. ಮತ್ತೆ ಚುನಾವಣೆ ಬೇಕಾದರೂ ಎದುರಾಗಲಿ. ಆಗ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಕೇಜ್ರಿವಾಲ್ ಅವರು ಹೇಳಿದ್ದಾರೆ.
ಇದೇ ನಿಜವಾದ ಪ್ರಜಾಪ್ರಭುತ್ವ: ಇದಕ್ಕೂ ಮೊದಲು ಭಾನುವಾರ ನಾಲ್ಕು ಕಡೆ ನಡೆದ ಜನಸಂಪರ್ಕ ಸಭೆಯಲ್ಲಿ ಕೇಜ್ರಿವಾಲ್ ಭಾಗವಹಿಸಿದ್ದರು. ಎಲ್ಲಾ ಸಭೆಗಳಲ್ಲೂ ಸರ್ಕಾರ ರಚಿಸುವಂತೆ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ದೆಹಲಿಯ ಸರೋಜಿನಿ ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, ‘ಸರ್ಕಾರ ರಚಿಸಿದರೂ ಜನರನ್ನು ಮರೆಯುವುದಿಲ್ಲ. ಪ್ರಮುಖ ಸಮಸ್ಯೆಗಳ ಕುರಿತಂತೆ ಪಕ್ಷ ನಡೆಸುತ್ತಿರುವ ಹೋರಾಟ ಮುಂದುವರಿಯಲಿದೆ’ ಎಂದಿದ್ದಾರೆ.
ಸರ್ಕಾರ ರಚಿಸಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಪಕ್ಷ ನಡೆಸುತ್ತಿರುವ ಜನಾಭಿಪ್ರಾಯ ಸಂಗ್ರಹಕ್ಕೆ ವ್ಯಕ್ತವಾಗಿರುವ ‘ನಾಟಕ’ ಎಂಬ ಟೀಕೆಯನ್ನು ತಳ್ಳಿಹಾಕಿರುವ ಕೇಜ್ರಿವಾಲ್, ‘ಇದು (ಜನಾಭಿಪ್ರಾಯ ಸಂಗ್ರಹ) ಪ್ರಜಾಪ್ರಭುತ್ವ– ಇದೇ ನಿಜವಾದ ಪ್ರಜಾಪ್ರಭುತ್ವ. ಹಾಗಂತ ಎಲ್ಲಾ ವಿಷಯಗಳಿಗೂ ಜನಾಭಿಪ್ರಾಯ ಸಂಗ್ರಹ ಮಾಡಲು ಸಾಧ್ಯವಿಲ್ಲ. ಇದೇ ಸಮಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ರೂಢಿಸಿಕೊಂಡಿರುವ ತೆರೆಮರೆಯ
ಚಟುವಟಿಕೆಗಳನ್ನು ನಾನು ಒಪ್ಪುವುದಿಲ್ಲ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.