ನವದೆಹಲಿ (ಪಿಟಿಐ): 1997ರ ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ತನಗೆ ಮರಣ ದಂಡನೆ ವಿಧಿಸಿದ್ದನ್ನು ಪ್ರಶ್ನಿಸಿ ಪಾಕಿಸ್ತಾನಿ ರಾಷ್ಟ್ರೀಯನೊಬ್ಬ ಸಲ್ಲಿಸಿದ ಅರ್ಜಿ ಸಂಬಂಧವಾಗಿ ಸುಪ್ರೀಂಕೋರ್ಟ್ ವಿಭಾಗೀಯ ಪೀಠವೊಂದು ಬುಧವಾರ ಪರಸ್ಪರ ವಿರುದ್ಧ ತೀರ್ಪು ನೀಡಿದೆ.
ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರು ಸಾಕ್ಷಿಗಳ ಪಾಟೀಸವಾಲು ನಡೆಯದ ಕಾರಣ ಹೊಸದಾಗಿ ವಿಚಾರಣೆ ನಡೆಸಬೇಕು ಎಂದು ಹೇಳಿದರೆ ಇನ್ನೊಬ್ಬ ನ್ಯಾಯಮೂರ್ತಿ ಸಿ.ಕೆ. ಪ್ರಸಾದ್ ಈ ಅಭಿಪ್ರಾಯವನ್ನು ಒಪ್ಪಲಿಲ್ಲ.
ಉಭಯ ನ್ಯಾಯಮೂರ್ತಿಗಳಿಂದ ವಿರುದ್ಧ ತೀರ್ಪು ಬಂದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಈಗ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಒಪ್ಪಿಸಲಾಗಿದೆ.
1997ರ ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ವಹಿಸಿದ ಪಾತ್ರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ 2004ರ ನವೆಂಬರ್ ತಿಂಗಳಲ್ಲಿ ಮೊಹಮ್ಮದ್ ಹುಸೇನ್ ಗೆ ಮರಣ ದಂಡನೆ ವಿಧಿಸಿತ್ತು. ದೆಹಲಿಯ ಬ್ಲೂಲೈನ್ ಬಸ್ಸಿನಲ್ಲಿ ಸಂಭವಿಸಿದ್ದ ಈ ಸ್ಫೋಟದಲ್ಲಿ ನಾಲ್ವರು ಮೃತರಾಗಿ 24 ಮಂದಿ ಗಾಯಗೊಂಡಿದ್ದರು.
ಈ ಪ್ರಕರಣವನ್ನು ~ಅಪರೂಪದಲ್ಲಿ ಅಪರೂಪ~ ಎಂಬುದಾಗಿ ಬಣ್ಣಸಿದ್ದ ವಿಚಾರಣಾ ನ್ಯಾಯಾಲಯ ಪಾಕಿಸ್ತಾನದಲ್ಲಿನ ಒಕಾರಾದಲ್ಲಿನ ಜಿಂದ್ರಖರ್ ಗ್ರಾಮದ ನಿವಾಸಿ ಹುಸೇನ್ ಗೆ ಮರಣದಂಡನೆ ವಿಧಿಸಿತ್ತು.
2006ರ ಆಗಸ್ಟ್ ತಿಂಗಳಲ್ಲಿ ಹೈಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿದಿತ್ತು. ಹುಸೇನ್ ಅದನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದ.
1997ರ ಡಿಸೆಂಬರ್ 30ರಂದು ಪಶ್ಚಿಮ ದೆಹಲಿಯ ಪಂಜಾಬಿ ಬಾಗ್ ಸಮೀಪದ ರಾಂಪುರದಲ್ಲಿ ಬ್ಲೂಲೈನ್ ಬಸ್ಸಿನಲ್ಲಿ ಬಾಂಬ್ ಸ್ಫೋಟಿಸಿ, 28 ಜನ ಗಾಯಗೊಂಡಿದ್ದರು. ಅವರ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರು ನಂತರ ಆಸ್ಪತ್ರೆಯಲ್ಲಿ ಮೃತರಾಗಿದ್ದರು.
1998ರ ಮಾರ್ಚ್ 21ರಂದು ಪೊಲೀಸರು ಹುಸೇನ್ ನನ್ನು ಬಂಧಿಸಿದ್ದರು. ನಗರದ ನ್ಯಾಯಾಲಯವು ಪ್ರಕರಣದ ವಿಚಾರಣೆ ಬಳಿಕ ಇತರ ಆರೋಪಿಗಳಾದ ಅಬ್ದುಲ್ ರಹಮಾನ್, ಅಜರ್ ಅಹಮದ್ ಮತ್ತು ಮಕ್ಸೂದ ಅಹಮದ್ ಅವರನ್ನು ಸಾಕ್ಷ್ಯ ಕೊರತೆಯ ಕಾರಣ ನೀಡಿ ಆರೋಪ ಮುಕ್ತರನ್ನಾಗಿ ಮಾಡಿತ್ತು.