ನವದೆಹಲಿ (ಪಿಟಿಐ):ದೆಹಲಿಯಲ್ಲಿ ಸರ್ಕಾರ ರಚನೆಗೆ ಯಾವುದೇ ಪಕ್ಷ ಆಸಕ್ತಿ ತೋರದೇ ಇರುವುದರಿಂದ ಬಿಕ್ಕಟ್ಟು ಪರಿಹರಿಸಲು ರಾಷ್ಟ್ರಪತಿ ಆಳ್ವಿಕೆ ಹೇರಲು ದೆಹಲಿಯ ಲೆ. ಗವರ್ನರ್ ನಜೀಬ್ ಜಂಗ್ ಶಿಫಾರಸು ಮಾಡಿದ್ದಾರೆ.
ದೆಹಲಿಯಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಮತ್ತು ಎರಡನೇ ದೊಡ್ಡ ಪಕ್ಷವಾಗಿರುವ ಆಮ್ ಆದ್ಮಿ ಪಕ್ಷದ ಜತೆ ವ್ಯಾಪಕ ಸಮಾಲೋಚನೆ ನಂತರ ಜಂಗ್ ಅವರು ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
‘ಯಾವುದೇ ಪಕ್ಷ ಸರ್ಕಾರ ರಚಿಸುವ ಸ್ಥಿತಿಯಲ್ಲಿ ಇಲ್ಲ. ಈ ಬಗ್ಗೆ ಯಾವುದೇ ಸ್ಪಷ್ಟತೆಯೂ ಇಲ್ಲ. ಆಮ್ ಆದ್ಮಿ ಪಕ್ಷ ಇನ್ನಷ್ಟು ಸಮಾಲೋಚನೆ ನಡೆಸಲು ಸಮಯ ಕೋರಿದೆ. ಹೀಗಾಗಿ ಯಾವುದಾದರೂ ಪಕ್ಷ ಅಥವಾ ಪಕ್ಷ ಗಳ ಗುಂಪು ಸರ್ಕಾರ ರಚಿಸುವ ತನಕ ವಿಧಾನಸಭೆ ಅಮಾನತಿನಲ್ಲಿರಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು’ ಎಂದು ವರದಿ ಸಲ್ಲಿಸಲಾಗಿದೆ. ಯಾವ ಪಕ್ಷವೂ ಸರ್ಕಾರ ರಚನೆಗೆ ಮುಂದಾಗದಿದ್ದರೆ ಎರಡು ದಿನಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯಾಗಬಹುದು .