ನವದೆಹಲಿ (ಪಿಟಿಐ): ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಾಶ್ಮೀರಿ ವೈದ್ಯಕೀಯ ವಿದ್ಯಾರ್ಥಿ ಒಬ್ಬನನ್ನು ವಶಕ್ಕೆ ತೆಗೆದುಕೊಂಡಿದೆ. ಸ್ಫೋಟದ ಸಂಚಿನ ರೂವಾರಿ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಬಾಂಗ್ಲಾ ದೇಶದಲ್ಲಿ ಯುನಾನಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿರುವ ವಾಸಿಂ ಅಹಮ್ಮದ್ ಬಂಧಿತನಾಡಿದ್ದು, ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ವಾಸಿಂನನ್ನು ಭಾರತ-ಬಾಂಗ್ಲಾ ಗಡಿಯಲ್ಲಿ ಬಂಧಿಸಲಾಗಿದೆಯೋ ಅಥವಾ ಬಾಂಗ್ಲಾ ದೇಶದ ಅಧಿಕಾರಿಗಳು ಆತನನ್ನು ಭಾರತಕ್ಕೆ ಹಿಡಿದುಕೊಟ್ಟಿದ್ದಾರೆ ಎಂಬುದರ ಬಗ್ಗೆ ಯಾವೊಬ್ಬ ಅಧಿಕಾರಿಯು ಇಲ್ಲಿಯವರೆಗೆ ತುಟಿ ಬಿಚ್ಚಿಲ್ಲ. ತನಿಖಾ ಸಂಸ್ಥೆಯು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮೂವರನ್ನು ವಶಕ್ಕೆ ತೆಗೆದುಕೊಂಡಿತ್ತು. ಆನಂತರ ಒಬ್ಬನನ್ನು ಬಿಡುಗಡೆ ಮಾಡಿತ್ತು.
ಸ್ಫೋಟದ ಸಂಚಿನ ಪ್ರಮುಖ ರೂವಾರಿ ಎಂದೇ ಹೇಳಲಾತ್ತಿರುವ ಹಿಜ್ಬುಲ್ ಮುಜಾಹಿದ್ದೀನ್ ಸಂಚಾಲಕ ಜುನೈದ್ ಅಕ್ರಂನ ಅಡಗುದಾಣಗಳ ಬಗ್ಗೆಯು ಪ್ರಶ್ನಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಅಬ್ಬಾಸ್ ಎನ್ಐಎ ವಶಕ್ಕೆ: ದೆಹಲಿ ಹೈಕೋರ್ಟ್ ಅವರಣದಲ್ಲಿ ಸೆ.7ರಂದು ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಬಂಧಿತ ಆರೋಪಿ ಅಮೀರ್ ಅಬ್ಬಾಸ್ ದೇವ್ನನ್ನು ಇದೇ 14 ರವರೆಗೆ ರಾಷ್ಟ್ರೀಯ ತನಿಖಾ ಆಯೋದಗದ ವಶಕ್ಕೆ ನೀಡುವಂತೆ ಶುಕ್ರವಾರ ದೆಹಲಿ ಕೋರ್ಟ್ ಆದೇಶಿಸಿದೆ.
ಈ ಪ್ರಕರಣವನ್ನು ವಿಚಾರಣೆ ಮಾಡಿದ ವಿಶೇಷ ನ್ಯಾಯಾಧೀಶ ಎಚ್.ಎಸ್. ಶರ್ಮಾ ಅವರು ಇನ್ನೂ ಏಳು ದಿನಗಳ ಕಾಲ ವಿಚಾರಣೆಗಾಗಿ ರಾಷ್ಟ್ರೀಯ ತನಿಖಾ ದಳದ ವಶಕ್ಕೆ ಅಬ್ಬಾಸ್ನನ್ನು ಒಪ್ಪಿಸಿದೆ.