ಬೆಂಗಳೂರು: ನೇಪಾಳ ಗಡಿಯಲ್ಲಿ ಇತ್ತೀಚೆಗೆ ಸೆರೆ ಸಿಕ್ಕ ಇಂಡಿಯನ್ ಮುಜಾಹಿದೀನ್ ಸಹ ಸಂಸ್ಥಾಪಕ ಯಾಸೀನ್ ಭಟ್ಕಳನ ವಿಚಾರಣೆ ನಡೆಸಲು ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪ್ರಣವ್ ಮೊಹಾಂತಿ ನೇತೃತ್ವದ ವಿಶೇಷ ಪೊಲೀಸ್ ತಂಡ ಬುಧವಾರ ಸಂಜೆ ದೆಹಲಿಗೆ ಹೊರಟಿತು.
ತನಿಖಾ ತಂಡದಲ್ಲಿರುವ ಅಧಿಕಾರಿಯೊಬ್ಬರು ಈ ವಿಷಯವನ್ನು ಖಾತರಿಪಡಿಸಿದ್ದಾರೆ. `ಯಾಸೀನ್ ಭಟ್ಕಳ ಸದ್ಯ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ವಶದಲ್ಲಿದ್ದಾನೆ. ಆತನ ವಿಚಾರಣೆಗೆ ಅವಕಾಶ ದೊರೆಯಬಹುದೆಂಬ ನಿರೀಕ್ಷೆಯಲ್ಲಿ ಹೊರಟಿದ್ದೇವೆ. ನಿಗದಿತ ಕಾಲಮಿತಿಯಲ್ಲಿ ಹೆಚ್ಚಿನ ಮಾಹಿತಿ ಕಲೆಹಾಕಲು ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ' ಎಂದು ಹೇಳಿದರು.
2010ರ ಚಿನ್ನಸ್ವಾಮಿ ಕ್ರೀಡಾಂಗಣ ಬಳಿಯ ಸ್ಫೋಟ ಹಾಗೂ ಇತ್ತೀಚಿನ ಮಲ್ಲೇಶ್ವರ ಸ್ಫೋಟ ಪ್ರಕರಣಗಳ ತನಿಖಾಧಿಕಾರಿಗಳಾದ ಎಸಿಪಿ ಬಿ.ಎನ್. ನ್ಯಾಮೇಗೌಡ, ಎಚ್.ಎಂ. ಓಂಕಾರಯ್ಯ ಮತ್ತು ಎಸ್.ಜಿತೇಂದ್ರನಾಥ್ ಈ ವಿಶೇಷ ತಂಡದಲ್ಲಿದ್ದಾರೆ.