ನವದೆಹಲಿ (ಪಿಟಿಐ): ಇತ್ತೀಚೆಗಷ್ಟೇ ಸಬ್ಸಿಡಿ ಸಿಲಿಂಡರ್ಗಳ ಮಿತಿ 6 ರಿಂದ 9ಕ್ಕೆ ಏರಿಕೆ ಮಾಡಿದ ಕೇಂದ್ರ ಸರ್ಕಾರದ ನಿರ್ಧಾರದಿಂದ ದೇಶದ ಜನತೆ ಖುಷಿಯಲ್ಲಿರುವಾಗಲೇ, ದೆಹಲಿ ನಾಗರೀಕರ ಖುಷಿ ಇನ್ನಷ್ಟು ನೂರ್ಮಡಿಸುವ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ದೆಹಲಿ ಸರ್ಕಾರ ಸೋಮವಾರ ಬಡ ಕುಟುಂಬಗಳಿಗೆ ವಾರ್ಷಿಕ 12 ಸಬ್ಸಿಡಿ ಸಿಲಿಂಡರ್ಗಳನ್ನು ನೀಡುವ ತೀರ್ಮಾನ ಕೈಗೊಂಡಿದೆ.
ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನೇತೃತ್ವದಲ್ಲಿ ಸೋಮವಾರ ನಡೆದ ಸಂಪುಟ ಸಭೆಯು ದೆಹಲಿ ಸರ್ಕಾರದ `ಸೀಮೆಎಣ್ಣೆ ಮುಕ್ತ ಯೋಜನೆ'ಯ ಭಾಗವಾಗಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಸದ್ಯ ವಾರ್ಷಿಕ 9 ಸಬ್ಸಿಡಿ ಸಿಲಿಂಡರ್ಗಳನ್ನು ಪಡೆಯುವ ಬಿಪಿಎಲ್, ಅಂತ್ಯೋದಯ ಹಾಗೂ ಜೆಆರ್ಸಿ ಕಾರ್ಡ್ದಾರರು ಇನ್ನೂ ಮುಂದೆ ಹೆಚ್ಚುವರಿ ಮೂರು ಸಬ್ಸಿಡಿ ಸಿಲಿಂಡರ್ಗಳನ್ನು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ಸಬ್ಸಿಡಿ ಸಿಲಿಂಡರ್ಗಳ ಮಿತಿಯನ್ನು ಕಳೆದ ಸೆಪ್ಟೆಂಬರ್ನಲ್ಲಿ 6ಕ್ಕೆ ಸೀಮಿತಗೊಳಿಸಿದ ನಡುವೆಯೇ ದೆಹಲಿ ಸರ್ಕಾರ ನವೆಂಬರ್ ವೇಳೆಗೆ `ಸೀಮೆಎಣ್ಣೆ ಮುಕ್ತ ಯೋಜನೆ'ಯ ಅಡಿಯಲ್ಲಿ ಗುರ್ತಿಸಲಾಗಿರುವ ಸುಮಾರು 3.56 ಲಕ್ಷ ಬಡ ಕುಟುಂಬಗಳಿಗೆ ಹೆಚ್ಚುವರಿ ಮೂರು ಸಬ್ಸಿಡಿ ಸಿಲಿಂಡರ್ಗಳನ್ನು ಒದಗಿಸುವ ತೀರ್ಮಾನ ಕೈಗೊಂಡಿತ್ತು.