ನವದೆಹಲಿ: `ಕಾವೇರಿ ಕೂಗು~ ದೆಹಲಿಯಲ್ಲಿ ಪ್ರತಿಧ್ವನಿಸಿದ್ದು, ಕರ್ನಾಟದಿಂದ ತಮಿಳುನಾಡಿಗೆ 9000 ಕ್ಯೂಸೆಕ್ ನೀರು ಬಿಡಬೇಕೆಂಬ ಕಾವೇರಿ ನದಿ ಪ್ರಾಧಿಕಾರದ ನಿರ್ದೇಶನ ರದ್ದು ಮಾಡಬೇಕು ಎಂದು ಆಗ್ರಹಿಸಿ `ಕಾವೇರಿ ಹಾಗೂ ಕಬಿನಿ ರೈತ ಹಿತರಕ್ಷಣಾ ವೇದಿಕೆ~ ಕಾರ್ಯಕರ್ತರು ಜಂತರ್ ಮಂತರ್ನಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರು ಖಾಲಿ ಕೊಡಗಳನ್ನು ಪ್ರದರ್ಶಿಸಿದರು. ಯುಪಿಎ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ ಎಂದು ಘೋಷಣೆಗಳನ್ನು ಕೂಗಿದರು.
ಅನಂತರ ರೈತರು ಕಾವೇರಿ ನದಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದರು. ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಡಿ.ವಿ. ಸಿಂಗ್ ಅವರಿಗೆ ಸಮಸ್ಯೆ ವಿವರಿಸಿದರು. ಪ್ರತಿಭಟನೆಯಲ್ಲಿ ದೇವರಾಜ್, ಕಿರುಗನೂರು ಶಂಕರ್, ಚಂದ್ರಶೇಖರಮೂರ್ತಿ, ಎಂ. ಮಹಾದೇವಸ್ವಾಮಿ, ಗೋಪಾಲಕೃಷ್ಣ, ದೇವಕುಮಾರ್, ನಾಗರಾಜ, ಪ್ರಭುಸ್ವಾಮಿ, ಟಿ.ಎಂ. ಮಹಾದೇವಪ್ಪ, ಬಸವರಾಜು, ಶಿವಕುಮಾರ್, ಶೋಭಾ, ಅನ್ನಪೂರ್ಣ, ಶೀಲಾ ಮೊದಲಾದವರು ಭಾಗವಹಿಸಿದ್ದರು.