ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ:ಲೆ.ಗವರ್ನರ್ ಅಂಗಳದಲ್ಲಿ ಚೆಂಡು

Last Updated 8 ಡಿಸೆಂಬರ್ 2013, 20:09 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೆಹಲಿ ವಿಧಾನ­ಸಭೆ ಚುನಾವಣೆ­ಯಲ್ಲಿ ಅತಂತ್ರ ಫಲಿ­ತಾಂಶ ಹೊರಬಿದ್ದಿ­ದ್ದರಿಂದ ರಾಷ್ಟ್ರದ ರಾಜ­ಧಾನಿಯಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಅನಿಶ್ಚಿತತೆ ಎದುರಾ­ಗಿದೆ.

ಒಟ್ಟೂ 70 ಸದಸ್ಯ ಬಲದ ವಿಧಾನ­ಸಭೆ­ಯಲ್ಲಿ ಭಾರತೀಯ ಜನತಾ ಪಕ್ಷ 32 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರ­ಹೊಮ್ಮಿದೆ. ಆದರೆ, ಸರಳ ಬಹುಮತ (36) ಅಗತ್ಯವಿರುವ ಸ್ಥಾನ ಗೆಲ್ಲಲು ಅದಕ್ಕೆ ಸಾಧ್ಯವಾಗಿಲ್ಲ.
ಭ್ರಷ್ಟಾಚಾರ ವಿರೋಧ ಹೋರಾಟದ ಮೂಲಕ ಅಸ್ತಿತ್ವಕ್ಕೆ ಬಂದಿರುವ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಒಟ್ಟು 28 ಸ್ಥಾನ­ಗಳನ್ನು ಗೆಲ್ಲುವ ಮೂಲಕ ಎರಡನೇ ಅತಿದೊಡ್ಡ ಪಕ್ಷವಾಗಿದೆ.

ದೆಹಲಿಯಲ್ಲಿ ಸತತ ಮೂರು ಬಾರಿ ಅಧಿಕಾ­ರದ ಸವಿ ಅನುಭವಿಸಿದ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಕೇವಲ 8 ಸ್ಥಾನಗ­ಳನ್ನು ಗೆಲ್ಲುವ ಮೂಲಕ ಹೀನಾಯ ಸೋಲು ಅನುಭವಿಸಿದೆ.

ಸರ್ಕಾರ ರಚನೆಗೆ ಮನವಿ ಸಲ್ಲಿಸು­ವುದು ಅಥವಾ ಲೆಫ್ಟಿನೆಂಟ್‌ ಗೌವರ್ನರ್‌ ಆಹ್ವಾನಕ್ಕೆ ಕಾಯುವುದು. ಈ ಎರಡು ಆಯ್ಕೆಗಳು ಬಿಜೆಪಿಯ ಮುಂದಿದೆ.

ಚುನಾ­ವಣೆ­ಯಲ್ಲಿ ಅತಿಹೆಚ್ಚು ಸ್ಥಾನಗ­ಳಿಸಿ­ರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಸರ್ಕಾರ ರಚನೆಗೆ ಬಿಜೆಪಿ ಆಹ್ವಾನ ನೀಡಿ, ಬಹುಮತ ಸಾಬೀತಿಗೆ ಕಾಲಮಿತಿ ನಿಗದಿಗೊಳಿಸುವ ಸಾಧ್ಯತೆ ಇದೆ.

ಆಮ್‌ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್‌ ಪಕ್ಷದ ನೆರವು ಪಡೆಯದೇ ವಿಧಾನಸಭೆ­ಯಲ್ಲಿ ಬಿಜೆಪಿ ಬಹುಮತ ಸಾಬೀತು ಪಡಿಸುವುದು ಅಸಾಧ್ಯ­ವಾಗಲಿದೆ.

‘ಬಹುಮತದ ಸಂಖ್ಯೆ (36)ಗಳಿಸಲು ನಾವು ಯಾವುದೇ ರೀತಿಯ ವಾಮ ಮಾರ್ಗಗಳನ್ನು ಅನುಸರಿಸುವುದಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊ­ಳ್ಳಲು ಆದ್ಯತೆ ನೀಡುತ್ತೇವೆ’ ಎಂದು ಬಿಜೆಪಿ ದೆಹಲಿ ಬಿಜೆಪಿ ಅಧ್ಯಕ್ಷ ವಿಜಯ ಗೊಯಲ್‌ ಹೇಳಿದ್ದಾರೆ.

‘ಸಹಜ ಪ್ರಕ್ರಿಯೆಗಳ ಮೂಲಕ ಬೆಂಬಲ ಸಿಕ್ಕರೆ ಸರ್ಕಾರ ರಚಿಸುತ್ತೇವೆ. ಇಲ್ಲದಿದ್ದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುತ್ತೇವೆ’ ಎಂದು ಬಿಜೆಪಿ ದೆಹಲಿ ಉಸ್ತುವಾರಿ ನಿತನ್‌ ಗಡ್ಕರಿ ಅವರು ಹೇಳಿದ್ದಾರೆ.

ಯಾರ ನೆರವೂ ಬಯಸುವುದಿಲ್ಲ: ಕೇಜ್ರಿವಾಲ್‌
ನವದೆಹಲಿ (ಐಎಎನ್‌ಎಸ್‌):  ‘ರಾಜಕೀ­ಯದ ಪ್ರಾಮಾಣಿಕ ಯುಗ ಪ್ರಾರಂಭ­ವಾಗಿದೆ’ ಎಂದು ಅರವಿಂದ ಕೇಜ್ರಿವಾಲ್‌ ಭಾನುವಾರ ಮಾಧ್ಯಮ­ದವರಿಗೆ ತಿಳಿಸಿದರು.

ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಹರ್ಷವರ್ಧನ ಅವರನ್ನು ಕೇಜ್ರಿವಾಲ್‌ ಅಭಿನಂದಿಸಿದ್ದಾರೆ.

‘ಇದು ಪಕ್ಷದ ವಿಜಯವಲ್ಲ. ಜನತೆಯ ವಿಜಯ’ ಎಂದು ಅವರು ಬಣ್ಣಿಸಿದ್ದಾರೆ. ‘ದಾನಿಗಳಿಂದ ಪಾರದರ್ಶಕ ರೀತಿಯಲ್ಲಿ ಸಂಗ್ರಹಿಸಿದ ರೂ. 20 ಕೋಟಿ ಬಜೆಟ್‌ ಬಳಸಿಕೊಂಡು ಪಕ್ಷ ಚುನಾವಣೆ ಎದುರಿಸಿತು’ ಎಂದು ಕೇಜ್ರಿವಾಲ್‌ ನುಡಿದರು.
‘ಶೀಲಾ ದೀಕ್ಷಿತ್‌ ಅವರೊಂದಿಗೆ ವೈಮನಸ್ಸು ಹೊಂದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ನಾವು ಯಾರ ಬೆಂಬಲವನ್ನು ನಿರೀಕ್ಷೆ ಮಾಡುವು­ದಿಲ್ಲ. ರಚನಾತ್ಮಕ ರೀತಿಯಲ್ಲಿ ವಿರೋಧ ಪಕ್ಷದ ಸ್ಥಾನ ನಿರ್ವಹಿಸುತ್ತೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT