ನವದೆಹಲಿ (ಪಿಟಿಐ): ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ವಿರುದ್ಧದ ವೀಸಾ ವಂಚನೆ ಆರೋಪ ಪ್ರಕರಣದಿಂದ ಭಾರತ ಮತ್ತು ಅಮೆರಿಕ ನಡುವೆ ಉಂಟಾಗಿರುವ ಬಿಕ್ಕಟ್ಟು ಶಮನವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ನ್ಯೂಯಾರ್ಕ್ನ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾಗಲು ದೇವಯಾನಿ ಅವರಿಗೆ ವಿನಾಯ್ತಿ ನೀಡಿದೆ. ಈ ಮಧ್ಯೆ, ಅವರಿಗೆ ವಿಶ್ವಸಂಸ್ಥೆಯಿಂದ ಮಾನ್ಯತೆ ದೊರೆತಿದೆ.
ಡಿ. 12ರಂದು ದೇವಯಾನಿ ಅವರನ್ನು ಬಂಧಿಸಲಾಗಿತ್ತು. ಇದು ಭಾರತ – ಅಮೆರಿಕ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಯಿತು. ದೇವಯಾನಿ ಅವರಿಗೆ ಪೂರ್ಣ ಪ್ರಮಾಣದ ರಾಜತಾಂತ್ರಿಕ ರಕ್ಷಣೆ ನೀಡಲು ಅವರನ್ನು ವಿಶ್ವಸಂಸ್ಥೆಯಲ್ಲಿರುವ ಭಾರತದ ಕಾಯಂ ಮಿಷನ್ಗೆ ವರ್ಗಾಯಿಸಲಾಗಿದೆ. ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿನ ಪ್ರಕ್ರಿಯೆಗಳ ನಂತರ ದೇವಯಾನಿ ಅವರಿಗೆ ವಿಶ್ವಸಂಸ್ಥೆಯಿಂದ ಮಾನ್ಯತೆ ದೊರೆತಿದೆ. ಇದಕ್ಕಾಗಿ ಭಾರತ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿತ್ತು.
ಅಮೆರಿಕ ರಾಯಭಾರ ಕಚೇರಿ ಮತ್ತು ಅದರ ಅಧಿಕಾರಿಗಳು ನೇಮಿಸಿಕೊಂಡಿರುವ ಭಾರತೀಯ ಉದ್ಯೋಗಿಗಳ ಬಗೆಗಿನ ಮಾಹಿತಿ ನೀಡಲು ನೀಡಿದ್ದ ಸೋಮವಾರದ ಗಡುವು ವಿಸ್ತರಿಸುವಂತೆ ರಾಯಭಾರ ಕಚೇರಿ ವಿನಂತಿಸಿಕೊಂಡಿದೆ.