ವಾಷಿಂಗ್ಟನ್ (ಪಿಟಿಐ): ಭಾರತದ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಅವರ ಬಂಧನ, ವಿವಸ್ತ್ರಗೊಳಿಸಿ ತಪಾಸಣೆ ನಡೆಸಿದ್ದರ ಬಗ್ಗೆ ಅಮೆರಿಕ ಬುಧವಾರ ವಿಷಾದ ವ್ಯಕ್ತಪಡಿಸಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರು ಭಾರತದ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪ್ರಕರಣದ ಬಗ್ಗೆ ವಿಷಾದದ ಮಾತುಗಳನ್ನು ಆಡಿದರು.
ಈ ದುರದೃಷ್ಟಕರ ಘಟನೆಯು ಉಭಯ ರಾಷ್ಟ್ರಗಳ ಆಪ್ತ ಹಾಗೂ ಸದೃಢ ಸಂಬಂಧವನ್ನು ಹಾಳುಗೆಡವಲು ಅವಕಾಶ ನೀಡುವುದಿಲ್ಲವೆಂದು ಕೆರಿ ಸ್ಪಷ್ಟಪಡಿಸಿದರು ಎಂದು ಅಮೆರಿಕ ವಿದೇಶಾಂಗ ಕಚೇರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
‘ಹೆಚ್ಚು ಕಡಿಮೆ ದೇವಯಾನಿಯಷ್ಟೇ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿರುವ ನನಗೆ ಭಾರತವು ಪ್ರಸ್ತಾಪಿಸುತ್ತಿರುವ ವಿಷಯಗಳು ಎಷ್ಟು ಸೂಕ್ಷ್ಮ ಎಂಬುದು ಅರ್ಥವಾಗುತ್ತದೆ’ ಎಂದು ಕೆರಿ ಅವರು ಮೆನನ್ ಬಳಿ ಹೇಳಿದರೆಂದೂ ಪತ್ರಿಕಾ ಹೇಳಿಕೆ ತಿಳಿಸಿದೆ.
‘ವಿದೇಶಗಳಲ್ಲಿರುವ ನಮ್ಮ ರಾಜತಾಂತ್ರಿಕ ಅಧಿಕಾರಿಗಳಿಗೆ ಎಂತಹ ಗೌರವ ಹಾಗೂ ಘನತೆ ಲಭ್ಯವಾಗಬೇಕು ಎಂದು ಬಯಸುತ್ತೇವೋ ಅದೇ ರೀತಿಯಲ್ಲೇ ನಾವು ಕೂಡ ಅಮೆರಿಕದಲ್ಲಿರುವ ವಿದೇಶಿ ರಾಜತಾಂತ್ರಿಕರಿಗೆ ಗೌರವ ನೀಡುವುದು ಮುಖ್ಯ’ ಎಂದೂ ಕೆರಿ ಹೇಳಿದ್ದಾರೆ.
ಬಿಕ್ಕಟ್ಟು ಶಮನಕ್ಕೆ ಯತ್ನ
ದೇವಯಾನಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧ ಬಿಗಡಾಯಿಸಿದ ಬೆನ್ನಲ್ಲೇ ಅಮೆರಿಕವು ಬುಧವಾರ ಅದನ್ನು ಶಮನಗೊಳಿಸುವ ಪ್ರಯತ್ನ ನಡೆಸಿದೆ.