ನವದೆಹಲಿ (ಪಿಟಿಐ): ದೇವಯಾನಿ ಪ್ರಕರಣದಲ್ಲಿ ಮೃದು ಧೋರಣೆ ತಳೆದಿರುವ ಭಾರತ, ‘ಉಭಯ ದೇಶಗಳ ನಡುವಣ ಸಂಬಂಧದ ವಿಭಿನ್ನ ಆಯಾಮವನ್ನು ಗಮನದಲ್ಲಿಟ್ಟುಗೊಂಡು ಹೆಜ್ಜೆ ಇಡಬೇಕಾಗಿದೆ’ ಎಂದು ಶುಕ್ರವಾರ ಹೇಳಿದೆ.
ದೇವಯಾನಿ ವಿರುದ್ಧದ ಪ್ರಕರಣವನ್ನು ವಾಪಸ್ ಪಡೆಯುವುದಕ್ಕೆ ಅಮೆರಿಕ ನಿರಾಕರಿಸುತ್ತಿದ್ದರೂ, ಈ ಪ್ರಕರಣ ಇತ್ಯರ್ಥವಾಗುವ ಭರವಸೆಯನ್ನು ಕೇಂದ್ರ ಸರ್ಕಾರ ಕಳೆದುಕೊಂಡಿಲ್ಲ.
‘ಉಭಯ ದೇಶಗಳ ನಡುವಣ ಸಂಬಂಧ ಅಮೂಲ್ಯವಾದುದು’ ಎಂದಿರುವ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್, ‘ಭಾರತವು ದೇವಯಾನಿ ಪ್ರಕರಣವನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತಿದೆ’ ಎಂದಿದ್ದಾರೆ.
ನಮ್ಮಂತೆಯೇ ನಡೆದುಕೊಳ್ಳಿ: ‘ನಾವು ಅಮೆರಿಕದ ರಾಜತಾಂತ್ರಿಕರನ್ನು ಸಭ್ಯತೆಯಿಂದ ನಡೆಸಿಕೊಳ್ಳುತ್ತೇವೆ. ಅದೇ ರೀತಿ ಅಮೆರಿಕ ಕೂಡ ಭಾರತದ ರಾಜತಾಂತ್ರಿಕರನ್ನು ಮರ್ಯಾದೆಯಿಂದ ನಡೆಸಿಕೊಳ್ಳಬೇಕು’ ಎಂದು ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಹೇಳಿದ್ದಾರೆ.
‘ಅಮೆರಿಕದ ಅಧಿಕಾರಿಗಳು ದೇವಯಾನಿ ಅವರನ್ನು ನಡೆಸಿಕೊಂಡಿರುವ ರೀತಿ ಸರಿಯಿಲ್ಲ’ ಎಂದು ಅವರು ಖಂಡಿಸಿದ್ದಾರೆ.
ಆದರ್ಶ ಹಗರಣದಲ್ಲಿ ದೇವಯಾನಿ ಹೆಸರು
ಮುಂಬೈ (ಪಿಟಿಐ): ಆದರ್ಶ ಹೌಸಿಂಗ್ ಸೊಸೈಟಿ ಹಗರಣದಲ್ಲಿ ದೇವಯಾನಿ ಖೋಬ್ರಾಗಡೆ ಹೆಸರೂ ಕೇಳಿಬಂದಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾದ ಆದರ್ಶ ಹಗರಣದ ತನಿಖಾ ವರದಿಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ.