ಹುಬ್ಬಳ್ಳಿ:ವಿಜ್ಞಾನ-ವೈಚಾರಿಕತೆ ಮುಂದುವರಿ ದಷ್ಟು ಮನುಷ್ಯ ಸಂಸ್ಕೃತಿ, ಧರ್ಮದಿಂದ ವಿಮುಖನಾಗುತ್ತಿದ್ದಾನೆ ಎಂದು ಬುದ್ನಿಯ ಸಿದ್ಧಾರೂಢ ಮಠದ ಪ್ರಭಾನಂದ ಸ್ವಾಮೀಜಿ ವಿಷಾದಿಸಿದರು.
ನಗರದ ಶಾಂಡಿಲ್ಯಾಶ್ರಮದಲ್ಲಿ ಮಂಗಳವಾರ ಚಂದ್ರಶೇಖರ ಸ್ವಾಮೀಜಿಗಳ 78ನೇ ಜಯಂತ್ಯುತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ದೇವರ ಇರುವಿಕೆಯು ನಂಬಿಕೆಯೇ ಹೊರತು ವಿಜ್ಞಾನದ ವಿಷಯವಲ್ಲ. ರೈತ ಭೂಮಿಗೆ ಬೀಜ ಬಿತ್ತುವುದು ನಂಬಿಕೆಯಿಂದ. ಅದುವೇ ಆಸ್ತಿಕತೆಯ ಮೂಲ ಅಂಶ. ನಂಬಿಕೆಯ ಬೀಜ ಬಿತ್ತಿ ನಮ್ಮನ್ನು ಭಗವಂತನಿಗೆ ಅರ್ಪಿಸಿ ಕೊಂಡಾಗ ಮಾತ್ರ ಯಶಸ್ಸು, ಸಂಪತ್ತಿನ ಫಲ ಸಿಗುತ್ತದೆ ಎಂದು ಅವರು ಹೇಳಿದರು.
ತಮ್ಮ ಇರುವಿಕೆಯನ್ನು ಒಪ್ಪುವ ಪ್ರತಿ ನಾಸ್ತಿಕರೂ ಮೂಲತಃ ಆಸ್ತಿಕರೇ. `ನನ್ನ ಅಸ್ತಿತ್ವವೇ ದೇವರ ಅಸ್ತಿತ್ವ' ಎಂಬುದನ್ನು ನಾವು ಅರಿಯಬೇಕಿದೆ ಎಂದರು.
ಮಣಿಪ್ರಸಾದ್ಗೆ `ಸ್ವರ ಚಂದ್ರ ಶಿಖರ' ಬಿರುದು
ಚಂದ್ರಶೇಖರ ಶ್ರೀಗಳ ಸ್ಮರಣಾರ್ಥ ನೀಡುವ ರಾಷ್ಟ್ರೀಯ ಪುರಸ್ಕಾರ ಹಾಗೂ `ಸ್ವರ ಚಂದ್ರ ಶಿಖರ' ಬಿರುದನ್ನು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಗುರುಕುಲದ ಗುರುಗಳಾದ ಪಂ. ಮಣಿಪ್ರಸಾದ ಅವರಿಗೆ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಪ್ರದಾನ ಮಾಡಿದರು.
ಸರಳಾ ಮಧುಸೂಧನ ಅವರು ಹಾಡಿರುವ ಶಾಸ್ತ್ರೀಯ ಸಂಗೀತದ ಗುಚ್ಛ `ಕ್ಲಾಸಿಕಲ್ ಮೆಲೊಡಿ' ಸಿ.ಡಿ.ಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.
ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಸಾನಿಧ್ಯ ಹಾಗೂ ಚಿಕ್ಕಮುನವಳ್ಳಿಯ ಶಂಕರಾನಂದ ಪರಮಹಂಸ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹರಳಕಟ್ಟಿಯ ಶಿವಾನಂದ ಮಠದ ನಿಜಗುಣ ಸ್ವಾಮೀಜಿ, ವಿದೂಷಿ ವಿಜಯಾ ಜಾಧವ, ಬಾಬುರಾವ್ ಹಾನಗಲ್, ಮನೋಜ್ ಹಾನಗಲ್ ಇತರರು ಹಾಜರಿದ್ದರು.